ಬೆಂಗಳೂರಲ್ಲಿ ಡ್ರಗ್ಸ್ ಕಡಿವಾಣಕ್ಕೆ ಕಠಿಣ ಕ್ರಮ : ನಗರ ಪೊಲೀಸ್ ಆಯುಕ್ತ ಬಿ.ದಯಾನಂದ
ಬೆಂಗಳೂರು,ಜು.26-ವಿದೇಶಿ ಪ್ರಜೆಗಳಿಂದ ನಗರದಲ್ಲಿ ಮಾದಕ ವಸ್ತು ಮಾರಾಟ ಮತ್ತು ಸೇವನೆ ಹೆಚ್ಚಾಗುತ್ತಿದ್ದು, ಇದನ್ನು ಕಡಿವಾಣ ಹಾಕಲು ಅಂಗ ಸಂಸ್ಥೆ ಗಳೊಂದಿಗೆ ಚರ್ಚಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಮತ್ತು ವೀಸಾ ಅನಧಿಕೃತ ವಿದೇಶಿ ಪ್ರಜೆಗಳಿಂದ ಮಾದಕ ವಸ್ತು ಜಾಲ ವಿಸ್ತಾರವಾಗುತ್ತಿದೆ. ಈ ಬಗ್ಗೆ ಈಗಾಗಲೇ ಸಿಸಿಬಿ ತಂಡ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎನ್ ಸಿ ಬಿ, ಎ್ ಆರ್ ಆರ್ ಓ ಸೇರಿದಂತೆ ಅಂಗ ಸಂಸ್ಥೆಗಳ ಜೊತೆ ಸಭೆ ನಡೆಸಿ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಅಕ್ರಮ ವೀಸಾ ಹೊಂದಿರುವ 20 ವಿದೇಶಿ ಪ್ರಜೆಗಳನ್ನು ಗುರುತಿಸಲಾಗಿದ್ದು, ಈಗಾಗಲೇ 10 ಮಂದಿಯನ್ನು ವಿದೇಶಗಳಿಗೆ ಕಳಿಸಿದ್ದು ಉಳಿದ ಹತ್ತು ಮಂದಿಯನ್ನು ಶೀಘ್ರದಲ್ಲೇ ಕಳುಹಿಸಿಕೊಡಲಾಗುವುದು ಎಂದರು.
ಶಾಲಾ ಮುಖ್ಯಸ್ಥರ ಜೊತೆ ಚರ್ಚೆ :ಮಾದಕ ವಸ್ತು ಜಾಲವು ಕಾಲೇಜುಗಳ ವ್ಯಾಪ್ತಿಯಲ್ಲಿ ಹೆಚ್ಚಾಗಿದ್ದು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ಆರೋಪಿಯ ಶೀಘ್ರ ಬಂಧನ :ಕೋರಮಂಗಲ ಪಿಜಿಗೆ ನುಗ್ಗಿ ಮಹಿಳೆಯನ್ನು ಹತ್ಯೆ ಮಾಡಿದ ಆರೋಪಿಯನ್ನು ಪೊಲೀಸರು ಹುಡುಕುತ್ತಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವ್ಹೀಲಿಂಗ್ ಪುಂಡರ ವಿರುದ್ಧ ಕ್ರಮ :ಇತ್ತೀಚೆಗೆ ಉದ್ಘಾಟನೆಯಾದ ಡಬ್ಬಲ್ ಡೆಕ್ಕರ್ ರಸ್ತೆಯಲ್ಲಿ ಕೆಲ ಪುಂಡರು ವೀಲಿಂಗ್ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ಕಂಡುಬಂದಿದ್ದು ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.