ಚಾರ್ಮುಡಿ ಘಾಟ್‌ನಲ್ಲಿ ಗುಡ್ಡ ಕುಸಿತ, ಟ್ರಾಫಿಕ್‌ ಜಾಮ್‌
ದಕ್ಷಿಣ ಕನ್ನಡ,ಜು.27-ಮಲೆನಾಡು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಚಾರ್ಮುಡಿಘಾಟ್‌ನಲ್ಲಿ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯ 10ನೇ ತಿರುವಿನಲ್ಲಿ ರಸ್ತೆಯ ಮೇಲೆ ಗುಡ್ಡ ಕುಸಿದ ಪರಿಣಾಮ ಸಂಪರ್ಕ ಕಡಿತಗೊಂಡು ಚಾರ್ಮುಡಿಘಾಟ್‌ನಿಂದ ಕೊಟ್ಟಿಗೆಹಾರದವರೆಗೆ ವಾಹನಗಳು ನಿಂತಲ್ಲೇ ನಿಂತಿದ್ದವು.
ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಯಿತು. ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲೇ ಪೊಲೀಸರು ವಾಹನಗಳನ್ನು ತಡೆದು ವಾಪಸ್‌‍ ಕಳುಹಿಸಿದರು.ಅತ್ತ ಉಜರಿ ಬಳಿ ಚಾರ್ಮುಡಿಘಾಟ್‌ ಪ್ರವೇಶ ನಿರ್ಬಂಧಿಸಿ ವಾಹನಗಳನ್ನು ಶಿರಾಡಿಘಾಟ್‌ ಬಳಿ ತೆರಳುವಂತೆ ಸೂಚಿಸಲಾಯಿತು.
ಪ್ರತಿಬಾರಿ ಮಳೆ ಬಂದಾಗಲೂ ಚಾರ್ಮುಡಿಘಾಟ್‌ನಲ್ಲಿ ಗುಡ್ಡ ಕುಸಿಯುವುದು, ರಸ್ತೆಗಳ ಮೇಲೆ ಬಂಡೆಗಳು ಉರುಳುವುದು ಸರ್ವೆಸಾಮಾನ್ಯವಾಗಿದೆ.ಪ್ರತಿಬಾರಿಯೂ ಕೂಡ ವಾಹನ ಸಂಚಾರಕ್ಕೆ ಅಡಚಣೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಮಳೆಗಾಲದಲ್ಲಿ ಆಗುವ ಈ ತೊಂದರೆ ತಪ್ಪಿಸಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ.