ವಾಲ್ಮೀಕಿ ನಿಗಮ ಹಗರಣದ ಪ್ರಮುಖ ಆರೋಪಿ ಮನೆಯಲ್ಲಿ 10 ಕೆಜಿ ಚಿನ್ನದ ಬಿಸ್ಕೆತ್ ಪತ್ತೆ..!
ಬೆಂಗಳೂರು,ಜು.27– ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಸಿಐಡಿ ಹಾಗೂ ಎಸ್‌‍ಐಟಿ ತನಿಖಾ ತಂಡವು ಪ್ರಮುಖ ಆರೋಪಿ ಸತ್ಯನಾರಾಯಣ ವರ್ಮಾ ಮನೆಯಲ್ಲಿ ಅಡಗಿಸಿಟ್ಟಿದ್ದ ಬರೋಬ್ಬರಿ 10 ಕೆಜಿ ಚಿನ್ನದ ಬಿಸ್ಕೆಟ್‌ಗಳನ್ನು ವಶಕ್ಕೆ ಪಡೆದಿದೆ.
ಅಲ್ಲದೆ ಹೈದ್ರಾಬಾದ್‌ನ ಫ್ಲಾಟ್‌ನಲ್ಲಿ ಅಡಗಿಸಿಟ್ಟಿದ್ದ 8 ಕೋಟಿ ರೂ. ಹಣವನ್ನು ಜಪ್ತಿ ಮಾಡಲಾಗಿದೆ.ಆರೋಪಿ ಸತ್ಯನಾರಾಯಣವರ್ಮಾ ವಾಲೀಕಿ ಹಗರಣದ ಹಣದಲ್ಲೇ ಚಿನ್ನ ಖರೀದಿಸಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ 15 ಕೆಜಿ ಚಿನ್ನದ ಬಿಸ್ಕೆಟ್‌ಗಳ ಬಗ್ಗೆ ಬಾಯ್ಸಿಟ್ಟಿದ್ದು, ಅದರಂತೆ ಹೈದ್ರಾಬಾದ್‌ನ ತ್ನ ಫ್ಲಾಟ್‌ನಲ್ಲಿ 10 ಕೆಜಿ ಚಿನ್ನದ ಗಟ್ಟಿ ಇಟ್ಟಿರುವುದಾಗಿ ಹೇಳಿದ್ದರು.
ಇದೀಗ ಎಸ್‌‍ಐಟಿ ತನಿಖಾ ತಂಡ ಚಿನ್ನದ ಬಿಸ್ಕೆಟ್‌ಗಳನ್ನು ವಶಕ್ಕೆ ಪಡೆದು ಉಳಿದ 5 ಕೆಜಿ ಚಿನ್ನದ ಬಿಸ್ಕೆಟ್‌ಗಾಗಿ ಶೋಧ ನಡೆಸುತ್ತಿದ್ದಾರೆ.ಒಟ್ಟಾರೆ ವಾಲೀಕಿ ನಿಗಮದ ಹಣದಿಂದ ಸತ್ಯನಾರಾಯಣ ವರ್ಮಾ ಬರೋಬ್ಬರಿ 35 ಕೆಜಿ ಚಿನ್ನದ ಬಿಸ್ಕೆಟ್‌ ಖರೀದಿ ಮಾಡಿರುವ ಮಾಹಿತಿಯನ್ನು ತನಿಖಾ ತಂಡ ಕಲೆ ಹಾಕಿವೆ.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸತ್ಯನಾರಾಯಣ ವರ್ಮಾ ನಾಪತ್ತೆಯಾಗಿದ್ದರು. ಎಸ್‌‍ಐಟಿ ತಂಡ ಸತತ ಒಂದು ವಾರಗಳ ಕಾಲ ಹುಡುಕಾಟ ನಡೆಸಿದ್ದರಾದರೂ ಪತ್ತೆಯಾಗಿರಲಿಲ್ಲ.
ತದನಂತರ ವರ್ಮಾ ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹೈದ್ರಾಬಾದ್‌ನಲ್ಲಿರುವುದು ಗೊತ್ತಾಯಿತು. ತಕ್ಷಣ ತನಿಖಾ ತಂಡ ಮಾಸ್ಟರ್‌ ಪ್ಲಾನ್‌ ಮಾಡಿ ಹೈದ್ರಾಬಾದ್‌ಗೆ ತೆರಳಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿ, ನಗರಕ್ಕೆ ಕರೆತಂದು ತೀವ್ರ ವಿಚಾರಣೆಗೊಳಪಡಿಸಿದಾಗ ಹಣ ಹಾಗೂ ಚಿನ್ನದ ಬಗ್ಗೆ ತಿಳಿಸಿದ್ದರು.
ಸತ್ಯನಾರಾಯಣ ವರ್ಮಾ ಬಂಧನಕ್ಕೊಳಗಾಗುವ ವೇಳೆಗಾಗಲೇ ಹಣ, ಚಿನ್ನವನ್ನು ಬೇರೆಬೇರೆ ಕಡೆಗಳಲ್ಲಿ ಸಾಗಿಸಿದ್ದರು.ತೀವ್ರ ವಿಚಾರಣೆಗೆ ಒಳಪಡಿಸಿದಾಗ ಹಣ ಹಾಗೂ ಫ್ಲಾಟ್‌ ಖರೀದಿ ಬಗ್ಗೆ ಸತ್ಯನಾರಾಯಣ ವರ್ಮಾ ಬಾಯ್ಬಿಟ್ಟಿದ್ದರು.
ತದನಂತರದಲ್ಲಿ ನ್ಯಾಯಾಲಯದಿಂದ ಸರ್ಚ್‌ ವಾರೆಂಟ್‌ ಪಡೆದು ಎಸ್‌‍ಐಟಿ ತಂಡ ಹೈದ್ರಾಬಾದ್‌ಗೆ ತೆರಳಿ ವರ್ಮಾಗೆ ಸೇರಿದ ಫ್ಲಾಟ್‌ ಶೋಧ ನಡೆಸಿದಾಗ ಬ್ಯಾಗ್‌ನಲ್ಲಿ ಅಡಗಿಸಿಟ್ಟಿದ್ದ 8 ಕೋಟಿ ಹಣವನ್ನು ಜಪ್ತಿ ಮಾಡಿದ್ದಾರೆ.  ಹೈದ್ರಾಬಾದ್‌ನ ಸೀಮಾಪೇಟೆ, ಮೀಯಾಪುರದಲ್ಲಿ ವಾಸವಿ ಬಿಲ್ಡರ್ಸ್‌ನಲ್ಲಿ ತಲಾ 2 ಫ್ಲಾಟ್‌ ಸೇರಿ ಬರೋಬ್ಬರಿ 11 ಫ್ಲಾಟ್‌ ಖರೀದಿಸಿರುವ ಬಗ್ಗೆ ಎಸ್‌‍ಐಟಿಗೆ ಮಾಹಿತಿ ಲಭ್ಯವಾಗಿದೆ.