ಪಿಎಸ್‌‍ಐ ಪರಶುರಾಮ್ ಸಾವು ಭ್ರಷ್ಟ ಸರ್ಕಾರ ಮಾಡಿದ ಕೊಲೆ : ಸಿ.ಟಿ.ರವಿ
ಬೆಂಗಳೂರು,ಆ.3-ಭ್ರಷ್ಟ ಕಾಂಗ್ರೆಸ್‌‍ ಸರ್ಕಾರದ ರೇಟ್‌ ಕಾರ್ಡ್‌ ಮತ್ತು ಎಕ್ಸ್ಟ್ರಾ ಟಿಪ್ಸ್ ಹಾವಳಿಯಿಂದ ಯಾದಗಿರಿಯ ಪಿಎಸ್‌‍ಐ ಪರಶುರಾಮ ಅವರ ಜೀವ ಹೋಗಿದೆ. ಇದು ಸಾವಲ್ಲ. ಭ್ರಷ್ಟ ಸರ್ಕಾರ ಮಾಡಿದ ಕೊಲೆ ಎಂದು ವಿಧಾನಪರಿಷತ್‌ ಸದಸ್ಯ ಹಾಗೂ ಮಾಜಿ ಸಚಿವ ಸಿ.ಟಿ.ರವಿ ಸ್ಫೋಟಕ ಆರೋಪ ಮಾಡಿದ್ದಾರೆ.
ಈ ಕುರಿತು ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಅವರು, ಭ್ರಷ್ಟತನದ ಪರಮಾವಧಿ ಮುಟ್ಟಿದ ರಾಜ್ಯ ಕಾಂಗ್ರೆಸ್‌‍ ಸರ್ಕಾರ ಇನ್ನೊಬ್ಬ ಪೊಲೀಸ್‌‍ ಅಧಿಕಾರಿಯನ್ನು ಬಲಿಪಡೆದಿದೆ ಎಂದು ದೂರಿದ್ದಾರೆ.
ಅತ್ಯಂತ ಬಡತನದ ಹಿನ್ನೆಲೆಯಿಂದ ಬಂದರೂ, ತನ್ನ ಛಲ ಮತ್ತು ಸಾಧನೆಯಿಂದ ಪಿಎಸ್‌‍ಐ ಆದ ಪರಶುರಾಮ್‌ ಛಲವಾದಿ ಯಾದಗಿರಿಯಲ್ಲಿ ನಿನ್ನೆ ಸಾವಿಗೀಡಾಗಿದ್ದಾರೆ. ಮೃತರ ಪತ್ನಿ ತನ್ನ ಪತಿಯ ಸಾವಿಗೆ, ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರು ಲಂಚದ ಹಣಕ್ಕಾಗಿ ಮಾಡಿದ ಒತ್ತಡದಿಂದ ತನ್ನ ಪತಿ ಸಾವನ್ನಪ್ಪಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಸಾವಿಗೆ ಭ್ರಷ್ಟ ಕಾಂಗ್ರೆಸ್‌‍ ಸರ್ಕಾರವೇ ನೇರ ಕಾರಣ ಎಂದು ಆರೋಪಿಸಿದ್ದಾರೆ.
ಮೃತ ಪಿಎಸ್‌‍ಐ ಪತ್ನಿ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್‌ ತುನ್ನೂರು ಅವರ ಹೆಸರೇಳಿದರೂ ಅವರನ್ಯಾಕೆ ಇನ್ನೂ ಬಂಧಿಸಿಲ್ಲ. ನಿಮ ಲಂಚದ ಹಾವಳಿಗೆ ಇನ್ನೆಷ್ಟು ಅಧಿಕಾರಿಗಳು ಬಲಿಯಾಗಬೇಕು? ಎಂದು ಪ್ರಶ್ನಿಸಿದರು. ಸಿಎಂ ಸಿದ್ದರಾಮಯ್ಯನವರೇ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರೇ, ಶಾಸಕ ಚನ್ನಾರೆಡ್ಡಿ ಪಾಟೀಲ್‌ ತುನ್ನೂರು ಮತ್ತವರ ಪುತ್ರನನ್ನು ಈ ಕೂಡಲೇ ಬಂಧಿಸಿ, ಮೃತ ಪಿಎಸ್‌‍ಐ ಸಾವಿಗೆ ನ್ಯಾಯ ದೊರಕಿಸಿ ಎಂದು ಆಗ್ರಹಿಸಿದ್ದಾರೆ.