ಶಾಸಕ ಗೋಪಾಲಕೃಷ್ಣ ಬೇಳೂರು ಬಂಧನಕ್ಕೆ ಸಿ.ಟಿ.ರವಿ ಒತ್ತಾಯ
ಬೆಂಗಳೂರು,ಆ.7-ಹಣಕ್ಕೆ ಬೇಡಿಕೆಯಿಟ್ಟು ಸಹಾಯಕ ಇಂಜಿನಿಯರ್‌ಗೆ ಜೀವ ಬೆದರಿಕೆ ಹಾಕಿರುವ ಶಿವಮೊಗ್ಗ ಜಿಲ್ಲೆ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಕೂಡಲೇ ಬಂಧಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಬೇಕೆಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಒತ್ತಾಯಿಸಿದ್ದಾರೆ.
ತಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಅಧಿಕಾರಿಗಳ ಹಣಕ್ಕಾಗಿ ಕಿರುಕುಳ ನೀಡುವುದೇ ಕರ್ನಾಟಕ ಕಾಂಗ್ರೆಸ್‌‍ ನೇತೃತ್ವದ ಸರ್ಕಾರದ ಒನ್‌ಲೈನ್‌ ಅಜೆಂಡಾ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಶಾಸಕರ ಮಾತು ಕೇಳಿ ಪುಡಿರೌಡಿಯಂತೆ ವರ್ತಿಸಿ ಸಹಾಯಕ ಎಂಜಿಯರ್‌ಗೆ ಸುಪಾರಿ ಪಡೆದು ಕಿರುಕುಳ ನೀಡುತ್ತಿರುವ ಡಿವೈಎಸ್ಪಿ ಅವರನ್ನು ಕೂಡ ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಸಹಾಯಕ ಎಂಜಿನಿಯರ್‌ ಒಬ್ಬರು ತಮಗೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಂದ ಜೀವಬೆದರಿಕೆಯಿದೆ, ದಯವಿಟ್ಟು ನನ್ನನ್ನು ಕಾಪಾಡಿ ಎಂದು ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಅಂಗಲಾಚುತ್ತಿರುವುದು ಕಾಂಗ್ರೆಸ್‌‍ ಸರ್ಕಾರದ ಭ್ರಷ್ಟಾಚಾರ ಮತ್ತು ಅರಾಜಕತೆ ವ್ಯಾಪ್ತಿ ಎಷ್ಟರ ಮಟ್ಟಿಗಿದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ ಎಂದು ರವಿ ವಾಗ್ದಾಳಿ ನಡೆಸಿದ್ದಾರೆ.