ಸ್ವಾತಂತ್ರ್ಯ ದಿನಾಚರಣೆಗೆ ಗದಗ್‌ನ ಇಬ್ಬರು  ವಿದ್ಯಾರ್ಥಿಗಳಿಗೆ ಮೋದಿ ಆಹ್ವಾನ
ಗದಗ,ಆ.10-ಗದಗ್‌ನ ಇಬ್ಬರು ಎನ್‌ಎಸ್‌‍ಎಸ್‌‍ ವಿದ್ಯಾರ್ಥಿಗಳ ಕಾರ್ಯವೈಖರಿ ಮೆಚ್ಚಿ ಪ್ರಧಾನಿ ಮೋದಿಯವರು ಸ್ವಾತಂತ್ರ್ಯ ದಿನಾಚರಣೆಗೆ ಆಹ್ವಾನ ನೀಡಿದ್ದಾರೆ. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಎನ್‌ಎಸ್‌‍ಎಸ್‌‍ ಘಟಕದಲ್ಲಿ ಸಕ್ರಿಯವಾಗಿ  ಕೆಲಸ ಮಾಡುತ್ತಿದ್ದರು. ಈ ಇಬ್ಬರು ವಿದ್ಯಾರ್ಥಿಗಳ ಕಾರ್ಯವೈಖರಿಯನ್ನು ಮೆಚ್ಚಿದ ಪ್ರಧಾನಿ ನರೇಂದ್ರಮೋದಿಯವರು ಸ್ವಾತಂತ್ರ್ಯೋತ್ಸವದ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದ್ದಾರೆ.
ಸ್ವಾತಂತ್ರ್ಯ ಅಮೃತ ಮಹೋತ್ಸವ ಸಮಯದಲ್ಲಿ ಮಹಾಗನಿ ಹಾಗೂ ತಬೀಗ್‌ರೋಸಾ ಜಾತಿಯ ಗಿಡಗಳನ್ನು ವಿದ್ಯಾರ್ಥಿಗಳು ನೆಟ್ಟು ಪಾಲನೆ, ಪೋಷಣೆ ಮಾಡಿದ್ದಾರೆ. ಈ ಪೈಕಿ ಗಿಡಗಳ ಪೋಷಣೆಯಲ್ಲಿ ತೊಡಗಿದ್ದ ಪಿಯುಸಿ ಓದುತ್ತಿರುವ ಸತೀಶ್‌ ಕನ್ನೇರ ಹಾಗೂ ಆದಿತ್ಯ ಕೊರವರ್‌ ಎನ್ನುವ ವದ್ಯಿರ್ಥಿಗಳಿಗೆ ಪ್ರಧಾನಿ ಕಾರ್ಯಾಲಯದಿಂದ ಆಹ್ವಾನ ಬಂದಿದೆ.
ಕೇಂದ್ರ ಸರ್ಕಾರದ ಮೇರಿ ಮುಟ್ಟಿ ಮೇರಾ ದೇಶ್‌ (ನನ್ನ ಮಣ್ಣು ನನ್ನ ದೇಶ) ಎನ್ನುವ ಕಾರ್ಯಕ್ರಮವನ್ನು ಕಾಲೇಜಿನ ಎನ್‌ಎಸ್‌‍ಎಸ್‌‍ ಘಟಕ ಯಶಸ್ವಿಯಾಗಿ ನಡೆಸಿದೆ. ಒಂದು ವರ್ಷದ ಪರ್ಯಂತ ಅಮೃತವಾಟಿಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದೆ. ಎನ್‌ಎಸ್‌‍ಎಸ್‌‍ ಘಟಕದ 100 ವಿದ್ಯಾರ್ಥಿಗಳು ಕಾಲೇಜು ಮುಂದೆ 50 ಗಿಡಗಳನ್ನು ನೆಟ್ಟು ಮಗುವಿನಂತೆ ಪಾಲನೆ, ಪೋಷಣೆ ಮಾಡಿದ್ದಾರೆ. ಈ ಗಿಡಗಳನ್ನು ಪೋಷಣೆ ಮಾಡಿದ್ದ ಕುರಿತು ಎಲ್ಲಾ ಮಾಹಿತಿಯನ್ನು ಕೇಂದ್ರ ಸರ್ಕಾರ ಹಾಗೂ ಎನ್‌ಎಸ್‌‍ಎಸ್‌‍ ಘಟಕದ ವೆಬ್‌ಸೈಟ್‌ನಲ್ಲಿ ಅಪ್ಲೋಡ್‌ ಮಾಡಲಾಗುತ್ತಿತ್ತು.
ಈ ನೂರು ವಿದ್ಯಾರ್ಥಿಗಳ ಪೈಕಿ ಇಬ್ಬರು ವಿದ್ಯಾರ್ಥಿಗಳು ಗಿಡಗಳನ್ನು ಅಚ್ಚುಕಟ್ಟಾಗಿ ಬೆಳೆಸಿದ್ದನ್ನು ಗಮನಿಸಿ ಅವರಿಗೆ ಪ್ರಧಾನಿ ಕಚೇರಿಯಿಂದ ಸ್ವಾತಂತ್ರ್ಯೋತ್ಸವಕ್ಕೆ ವಿಶೇಷ ಅತಿಥಿಗಳಾಗಿ ಆಹ್ವಾನ ನೀಡಲಾಗಿದೆ.ಇದು ನಮ ಕಾಲೇಜಿನ ಹೆಮೆ ಎಂದು ಕಾಲೇಜು ಉಪನ್ಯಾಸಕರು ಹೇಳಿದ್ದಾರೆ.