ನೈಸ್ ಯೋಜನೆಗೆ ಸ್ವಾದೀನಪಡಿಸಿಕೊಂಡ ಹೆಚ್ಚುವರಿ ಜಮೀನನ್ನು ರೈತರಿಗೆ ಹಿಂದಿರುಗಿಸಿ : ದೇವೇಗೌಡರು
ಬೆಂಗಳೂರು,ಜ.5- ಬೆಂಗಳೂರು-ಮೈಸೂರು ಇನ್‍ಫ್ರಾಸ್ಟ್ರಕ್ಚರ್ ಕಾರಿಡಾರ್(ಬಿಎಂಐಸಿ) ಯೋಜನೆಗೆ ಸ್ವಾೀಧಿನಪಡಿಸಿಕೊಂಡಿದ್ದ ಹೆಚ್ಚುವರಿ ಜಮೀನನ್ನು ಮರಳಿ ರೈತರಿಗೆ ನೀಡಬೇಕು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಅಕ್ಟೋಬರ್ 19ರಂದು ಮುಖ್ಯಮಂತ್ರಿಗೆ ಪತ್ರ ಬರೆದು, ಈ ಯೋಜನೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ಬಡವರ ಜಮೀನನ್ನು ಉಳಿಸಿಕೊಡುವಂತೆ ಕೋರಿದ್ದೇನೆ ಎಂದರು.
ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಅಧ್ಯಕ್ಷತೆಯ ಸದನ ಸಮಿತಿಯು ಬಿಎಂಐಸಿ ಯೋಜನೆಯ ಅಕ್ರಮ ವಿಚಾರ ಪ್ರಸ್ತಾಪಿಸಿ ಸರ್ಕಾರ ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಿದ್ದೆ. ಆದರೂ ಈ ತನಕ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಯೋಜನೆಗೆ ಒಳಪಡದ ಸುಮಾರು 7 ಸಾವಿರ ಕೋಟಿ ಮೌಲ್ಯದ 13 ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯನ್ನು ವಾಪಸ್ ರೈತರಿಗೆ ನೀಡಬೇಕು. ಸದನ ಸಮಿತಿ ಶಿಫಾರಸ್ಸಿನ ಅನ್ವಯ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಏನು ಕಷ್ಟವಿದೆಯೋ ಗೊತ್ತಿಲ್ಲ. ಯಾವಾಗಲೂ ಬಡವರ ಪರ ಮಾತನಾಡುವ ಸಿದ್ದರಾಮಯ್ಯನವರು ಬಿಎಂಐಸಿ ವಿಚಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಅವರು ಎಷ್ಟೇ ಉತ್ತಮ ಆಡಳಿತ ನಡೆಸಿದರೂ ಕಪ್ಪುಚುಕ್ಕೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ ಎಂದರು.
ಜೆ.ಎಚ್.ಪಟೇಲ್, ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಕಾಂಗ್ರೆಸ್ ಅನಾಯಕಿ ಸೋನಿಯಾ ಗಾಂಧಿ ಅವರ ಸಮ್ಮುಖದಲ್ಲಿ ಮಾತುಕತೆ ಆಗಿತ್ತು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಧರ್ಮಸಿಂಗ್ , ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಹಾಗೂ ನಾನು ಇದ್ದೆವು. ಆ ಸಂದರ್ಭದಲ್ಲಿ ಸೋನಿಯಾ ಗಾಂಧಿಯವರು ಬಿಎಂಐಸಿ ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳಲು ಧರ್ಮಸಿಂಗ್‍ಗೆ ಸೂಚಿಸಿದ್ದರು. ಈತನಕ ಯಾವುದೇ ಕ್ರಮ ಆಗಿಲ್ಲ ಎಂದು ಹೇಳಿದರು.
ಬಿಎಂಐಸಿ ವಿರುದ್ಧದ ಹೋರಾಟದಲ್ಲಿ ನಮ್ಮ ಪಕ್ಷ ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ. ಹಿಂದೆ ಸರಿಯುವುದಿಲ್ಲ, ಬಡವರ , ರೈತರಪರ ಹೋರಾಟ ಮುಂದುವರೆಸುತ್ತೇವೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ ಹೆಚ್ಚುವರಿ ಭೂಮಿ ಕೊಡಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್‍ಗೆ ಪ್ರಮಾಣಪತ್ರ ಸಲ್ಲಿಸಲಾಗಿದೆ ಎಂದರು. ಇಡೀ ರಾಜ್ಯದಲ್ಲಿ ರೈತರ ಪರ ನಮ್ಮ ಪಕ್ಷ ಹೋರಾಟವನ್ನು ಮುಂದುವರೆಸಲಿದೆ ಎಂದು ಗೌಡರು ಹೇಳಿದರು.
ಉತ್ತರ ಪ್ರದೇಶ : ವಾಂಟೆಡ್ ಕ್ರಿಮಿನಲ್ ವಿನೋದ್ ಕುಮಾರ್ ಉಪಾಧ್ಯಾಯ ಎನ್‌ಕೌಂಟರ್‌
ಸೇಡಿನ ರಾಜಕಾರಣ:30 ವರ್ಷ ಹಳೆಯ ಪ್ರಕರಣಕ್ಕೆ ಮರುಜೀವ ಕೊಟ್ಟು ರಾಜ್ಯ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ಎನ್‍ಡಿಎ ಮಿತ್ರಪಕ್ಷವಾಗಿರುವ ನಾವು ಎಲ್ಲಿಯವರೆಗೂ ಮೈತ್ರಿ ಮುಂದುವರೆಸುತ್ತೇವೋ ಅಲ್ಲಿಯವರೆಗೂ ಸೇಡಿನ ರಾಜಕಾರಣದ ವಿರುದ್ಧ ದನಿ ಎತ್ತುತ್ತೇವೆ. ನಾಲ್ಕು ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನರ ಸಂಪತ್ತು,ಹಣವನ್ನು ಎಷ್ಟು ಸಾಗಿಸಿದರೂ, ಚುನಾವಣಾ ಆಯೋಗ ಎಷ್ಟನ್ನು ಸೀಜ್ ಮಾಡಿದೆ ಎಂಬ ಮಾಹಿತಿ ಇದೆ.
ಉಪಮುಖ್ಯಮಂತ್ರಿ ಅವರೇ ನೀರಾವರಿ ಖಾತೆಯ ಹೊಣೆ ಹೊತ್ತಿದ್ದರು. ಏನಾಗುತ್ತದೆ ಎಂದು ಪ್ರಶ್ನಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇಂಥದ್ದನೆಲ್ಲ ತಡೆಯುವ ಶಕ್ತಿ ಇದೆಯೋ ಇಲ್ಲವೊ ಗೊತ್ತಿಲ್ಲ. ಅಹಿಂದ ಮತ್ತು ಬಡವರ ಬಗ್ಗೆ ಸಿದ್ದರಾಮಯ್ಯ ಪಣ ತೊಟ್ಟು ನಿಂತಿದ್ದಾರೆ. ಟಿಪ್ಪು ಬಿಟ್ಟರೆ ಬೇರೆ ಕೆಲಸವೇ ಇಲ್ಲವೇ ಎಂದು ಪ್ರಶ್ನಿಸಿದರು.
ಶ್ರೀರಾಮನ ಪೂಜೆ ಮಾಡುವೆ:ಶ್ರೀರಾಮನ ಪೂಜೆ ಮಾಡುವ ವಿಚಾರದಲ್ಲಿ ಯಾವುದೇ ಅಪನಂಬಿಕೆ, ಮನಸ್ಸಿನಲ್ಲಿ ಸಂಕೋಚವೂ ಇಲ್ಲ. ಮುಸ್ಲಿಂ ಸಮುದಾಯದವರು ಕೊಟ್ಟಿದ್ದ ಚಿನ್ನದ ಕತ್ತಿಯನ್ನು ಶ್ರೀರಾಮನ ದೇವಾಲಯಕ್ಕೆ ನೀಡಿದ್ದೇನೆ. ಆಗ ಕತ್ತಿಗೆ 65 ಸಾವಿರ ರೂ. ಹಣವನ್ನೂ ಕಟ್ಟಲಾಗಿದೆ. ಬೇರೆ ಸಮುದಾಯದವರಿಗೆ ಅಪಾಯವಾದರೆ ರಕ್ಷಣೆ ಕೊಡಬೇಕಾಗಿದ್ದು ಅಧಿಕಾರದಲ್ಲಿರುವವರ ಜವಾಬ್ದಾರಿ. ಪ್ರಧಾನಿಯಾಗಿದ್ದಾಗ ದರ್ಗಾಕ್ಕೂ ಹೋಗಿದ್ದೆ. ದೇವಾಲಯಕ್ಕೂ ಹೋಗಿದ್ದೆ. ಆದರೆ ನಿಷ್ಪಕ್ಷಪಾತವಾಗಿ ಕೆಲಸ ಮಾಡಿದ್ದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್, ರಾಜಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಮಾಜಿ ಸದಸ್ಯ ರಮೇಶ್ ಗೌಡ, ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.