ನೈತಿಕ ಪೊಲೀಸ್‍ಗಿರಿ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಪರಮೇಶ್ವರ್ ಸೂಚನೆ
ಬೆಂಗಳೂರು,ಜ.11- ನೈತಿಕ ಪೊಲೀಸ್‍ಗಿರಿ ವಿಷಯವಾಗಿ ಯಾವುದೇ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಪದೇ ಪದೇ ವರದಿಯಾಗುತ್ತಿರುವ ಪ್ರಕರಣಗಳ ಬಗ್ಗೆ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಈಗಾಗಲೇ ಪೊಲೀಸ್‍ಗಿರಿಗೆ ಉನ್ನತಮಟ್ಟದ ಸೂಚನೆಯನ್ನು ನೀಡಿದ್ದೇವೆ. ಎಲ್ಲೇ ಆಗಲೀ, ಯಾರೇ ಆಗಲಿ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಇರಬಾರದು. ಇಂತಹುದ್ದೆನ್ನೆಲ್ಲಾ ಮಟ್ಟ ಹಾಕಬೇಕೆನ್ನುವುದು ಸರ್ಕಾರದ ನಿಲುವಾಗಿದೆ.
ಈ ನಿಟ್ಟಿನಲ್ಲಿ ಈಗಾಗಲೇ ಸೂಚನೆ ನೀಡಲಾಗಿದೆ. ಪೊಲೀಸರು ಅದನ್ನು ಪಾಲನೆ ಮಾಡುತ್ತಾರೆ. ಸಂಬಂಧಪಟ್ಟ ಪ್ರಕರಣಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು. ಅಯೋಧ್ಯೆಯಲ್ಲಿನ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ನೀಡಲಾದ ಆಹ್ವಾನವನ್ನು ಕಾಂಗ್ರೆಸ್ ಹೈಕಮಾಂಡ್ ಗೌರವಯುತವಾಗಿ ತಿರಸ್ಕರಿಸಿದೆ.
ಈ ನಿಲುವಿಗೆ ನಾವೆಲ್ಲಾ ಬದ್ಧರಾಗಿದ್ದೇವೆ. ಪಕ್ಷ ಹೇಳಿದಂತೆ ಕೇಳುವುದು ನಮ್ಮ ಕರ್ತವ್ಯ. ಸಂದರ್ಭ ಬಂದರೆ ವೈಯಕ್ತಿಕವಾಗಿ ನನ್ನ ಅಭಿಪ್ರಾಯವನ್ನು ಹೈಕಮಾಂಡ್‍ಗೆ ತಿಳಿಸುತ್ತೇನೆ. ಸದ್ಯಕ್ಕೆ ಪಕ್ಷ ಹೇಳಿದಂತೆ ಪಾಲನೆ ಮಾಡುತ್ತೇವೆ. ನಾವ್ಯಾರೂ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಹೇಳಿದರು.  ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಗೆ ಸಂಬಂಧಪಟ್ಟಂತೆ ಇಂದು ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಚರ್ಚೆಯಾಗುವುದಿಲ್ಲ.
ಕೋಟ್ಯಂತರ ಹಿಂದೂಗಳ ಭಾವನೆಗೆ ಕಾಂಗ್ರೆಸ್ ಧಕ್ಕೆ ತಂದಿದೆ : ಬಿಎಸ್‌ವೈ
ಸಚಿವ ಕೆ.ಎನ್.ರಾಜಣ್ಣ ಸೇರಿದಂತೆ ಅನೇಕ ಸ್ನೇಹಿತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ವಿವಿಧ ಸಮುದಾಯಗಳಿಗೆ ಉಪಮುಖ್ಯಮಂತ್ರಿ ಹುದ್ದೆ ದೊರೆತಾಗ ನಾವೂ ಸರ್ಕಾರದಲ್ಲಿ ಭಾಗಿ ಎಂಬ ಅಭಿಪ್ರಾಯ ಅವರಲ್ಲಿ ಬರುತ್ತದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಮತ ಹಾಕುತ್ತಾರೆ ಎಂಬ ನಿಲುವು ಅವರದಾಗಿತ್ತು. ಆದರೆ ಎಐಸಿಸಿ ಅಧ್ಯಕ್ಷರು ಈ ವಿಷಯವಾಗಿ ಸ್ಪಷ್ಟ ಸೂಚನೆ ನೀಡಿದ್ದಾರೆ. ಅದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಸಚಿವರು ತಮ್ಮ ಕ್ಷೇತ್ರದ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕೆಂದು ಆರಂಭದಲ್ಲೇ ಸೂಚಿಸಲಾಗಿತ್ತು. ಇಂದಿನ ಸಭೆಯಲ್ಲಿ ಮತ್ತಷ್ಟು ಸೂಚನೆಗಳು ದೊರೆಯುವ ಸಾಧ್ಯತೆಯಿದ್ದು, ಯಾವ ಚರ್ಚೆಗಳು ನಡೆಯುತ್ತವೆ. ಸಚಿವರ ಸ್ಪರ್ಧೆಗೆ ಸೂಚನೆ ನೀಡುತ್ತಾರೆಯೇ ಎಂಬೆಲ್ಲಾ ವಿಷಯಗಳ ಬಗ್ಗೆ ಸದ್ಯಕ್ಕೆ ತಮಗೆ ಮಾಹಿತಿ ಇಲ್ಲ ಎಂದು ಹೇಳಿದರು.