ಖರ್ಗೆ ಎಚ್ಚರಿಕೆ ನಡುವೆಯೂ ಮತ್ತೊಂದು ಸುತ್ತಿನ ಚರ್ಚೆಗೆ ಗ್ರಾಸವಾದ ಯತೀಂದ್ರ ಹೇಳಿಕೆ
ಬೆಂಗಳೂರು,ಜ.17- ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಮಾಗಡಿ ಶಾಸಕ ಎಸ್.ಸಿ.ಬಾಲಕೃಷ್ಣ ಅವರ ಹೇಳಿಕೆಯ ಬೆನ್ನಲ್ಲೇ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ಮಾಜಿ ಶಾಸಕ ಯತೀಂದ್ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೆ ಸಿದ್ದರಾಮಯ್ಯನವರೇ 5 ವರ್ಷ ಮುಂದುವರೆಯಲಿದ್ದಾರೆ ಎಂದು ನೀಡಿರುವ ಹೇಳಿಕೆ ಮತ್ತೊಂದು ಸುತ್ತಿನ ಚರ್ಚೆಗೆ ಗ್ರಾಸವಾಗಿದೆ.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹುದ್ದೆಯ ಕುರಿತು ಚರ್ಚೆ ಮಾಡಬೇಡಿ. ಲೋಕಸಭೆ ಚುನಾವಣೆಯತ್ತ ಗಮನ ಕೊಡಿ. ಸರ್ಕಾರದ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸಲು ಕೆಲಸ ಮಾಡಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಕಟ್ಟೆಚ್ಚರದ ನಡುವೆಯೂ ಚರ್ಚೆಗಳು ಮತ್ತೆ ಚಾಲನೆಗೊಳ್ಳುತ್ತಿವೆ. ನಿನ್ನೆ ಯತೀಂದ್ರ ಅವರ ಹೇಳಿಕೆಗೆ ಪಕ್ಷದ ಸಚಿವರು, ಹಿರಿಯ ನಾಯಕರು ಅಂತರ ಕಾಯ್ದುಕೊಂಡಿದ್ದಾರೆ. ಯತೀಂದ್ರ ಅವರ ವೈಯಕ್ತಿಕ ಹೇಳಿಕೆ. ಅದಕ್ಕೂ, ಪಕ್ಷಕ್ಕೂ ಸಂಬಂಧವಿಲ್ಲ ಎಂದು ಬಹಳಷ್ಟು ಮಂದಿ ಜಾರಿಕೊಂಡಿದ್ದಾರೆ.
ನಮ್ಮದು ರಾಜನೀತಿ ಅಲ್ಲ ಧರ್ಮನೀತಿ : ಆಚಾರ್ಯ ಸತ್ಯೇಂದ್ರ ದಾಸ್
ಯತೀಂದ್ರ ಅವರ ಹೇಳಿಕೆ ಮುಖ್ಯಮಂತ್ರಿ ಹುದ್ದೆಯ ಅನಿಶ್ಚಿತತೆಯ ಸುಳಿವು ನೀಡಿದೆ ಎಂದು ವಿರೋಧ ಪಕ್ಷಗಳು ಟೀಕಿಸಲಾರಂಭಿಸಿವೆ. ಕಳೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಘೋಷಣೆಯಾದ ಬಳಿಕ ದೆಹಲಿಯಲ್ಲಿ ನಡೆದ ಮುಖ್ಯಮಂತ್ರಿ ಆಯ್ಕೆ ಕಸರತ್ತಿನಲ್ಲಿ ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲ. ಅದು ಕೆಲವೇ ಕೆಲವು ನಾಯಕರ ನಡುವೆ ನಡೆದ ಚರ್ಚೆಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಶಾಸಕರು ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಹೇಳಿಕೆ ನೀಡಿದ್ದರು.
ಇನ್ನೂ ಕೆಲವು ಹೆಜ್ಜೆ ಮುಂದೆ ಹೋಗಿ ಲೋಕಸಭೆ ಚುನಾವಣೆ ಬಳಿಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದರು. ಈ ವಿಚಾರಗಳು ವ್ಯಾಪಕ ಚರ್ಚೆಯಾಗುತ್ತಿವೆ. ಜೊತೆಯಲ್ಲಿ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಕುರಿತು ನಾನಾ ರೀತಿಯ ವ್ಯಾಖ್ಯಾನಗಳು ನಡೆದಿದ್ದವು.
ಹೈಕಮಾಂಡ್ ಸೂಚನೆ ಬಳಿಕ ಎಲ್ಲವೂ ತಹಬದಿಗೆ ಬಂದಿದೆ ಎಂಬ ಸಂದರ್ಭದಲ್ಲೇ ಮಾಗಡಿಯ ಬಾಲಕೃಷ್ಣ ಮತ್ತು ಯತೀಂದ್ರ ಅವರ ಹೇಳಿಕೆಗಳು ತಿಳಿಗೊಳಕ್ಕೆ ಕಲ್ಲೆಸೆದಂತಾಗಿದೆ. ಲೋಕಸಭೆ ಚುನಾವಣೆಯಲ್ಲೇ ಮತ್ತೊಂದು ಸುತ್ತಿನ ಅಕಾರ ಹಂಚಿಕೆ ಹಾಗೂ ಇತರ ವಿಚಾರಗಳ ಕುರಿತು ಬಿರುಸಿನ ಚರ್ಚೆಗಳು ನಡೆಯುವ ನಿರೀಕ್ಷೆಗಳಿವೆ. ಮೇಲ್ನೋಟಕ್ಕೆ ಬಹಳಷ್ಟು ಮಂದಿ ಶಾಸಕರು ಯತೀಂದ್ರ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.