ದರ್ಶನ್‌ ಮದುವೆಯಾಗಲು ನಾನು ಸಿದ್ಧ ಎಂದು ಜೈಲಿನ ಬಳಿ ಮಹಿಳೆ ರಂಪಾಟ
ಬಳ್ಳಾರಿ,ಸೆ.5-ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌ ಅವರನ್ನು ನೋಡಲೇಬೇಕು ಎಂದು ಮಹಿಳಾ ಅಭಿಮಾನಿಯೊಬ್ಬರು ಬಳ್ಳಾರಿ ಕೇಂದ್ರ ಕಾರಾಗೃಹದ ಮುಂದೆ ಪಟ್ಟು ಹಿಡಿದ ಘಟನೆ ನಡೆದಿದೆ.
ಬೆಂಗಳೂರಿನಿಂದ ಬಳ್ಳಾರಿಗೆ ತೆರಳಿದ ಲಕ್ಷ್ಮಿ ಎಂಬ ಅಭಿಮಾನಿ ದರ್ಶನ್‌ ಏನು ತಪ್ಪು ಮಾಡಿದ್ದಾರೆ ಎಂದು ಜೈಲಿನಲ್ಲಿಟ್ಟಿದ್ದಾರೆ?, ಬೆಂಗಳೂರು ಜೈಲಿನಲ್ಲಿ ಸಿಗರೇಟ್‌ ಸೇದಿದರು ಎಂಬ ಕಾರಣಕ್ಕಾಗಿ ಬಳ್ಳಾರಿಗೆ ತಂದು ಹಾಕಿದ್ದಾರೆ. ಯಾರೂ ಬೀಡಿ, ಸಿಗರೇಟು ಸೇದುವುದೇ ಇಲ್ಲವೇ?, ಅದೇನು ಮಹಾಪರಾಧವೇ? ಎಂದು ಪ್ರಶ್ನಿಸಿದರು.
ದರ್ಶನ್‌ರನ್ನು ನೋಡಬೇಕೆಂಬ ಆಸೆ ತುಂಬಾ ಜನಕ್ಕೆ ಇರುತ್ತದೆ. ಬರುವವರಿಗೆ ಅವಕಾಶ ಮಾಡಿಕೊಡಬೇಕು. ಈ ಹಿಂದೆ ನಾನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದೆ. ಅಲ್ಲಿಯೂ ಭೇಟಿಯಾಗಲಿಕ್ಕಾಗಲಿಲ್ಲ. ಹೀಗಾಗಿ ಬಳ್ಳಾರಿಗೆ ಬಂದಿದ್ದೇನೆ. ನಾನು ಅವರೊಂದಿಗೆ ಮಾತನಾಡದೇ ಇದ್ದರೂ ಪರವಾಗಿಲ್ಲ, ನೋಡಲು ಅವಕಾಶ ಕೊಡಿ. ನಾನು ಹಣ್ಣುಹಂಪಲುಗಳನ್ನು ಮಾತ್ರ ತಂದಿದ್ದೇನೆ. ದರ್ಶನ್‌ ಇಷ್ಟಪಟ್ಟರೆ ಚಿಕನ್‌, ಮಟನ್‌ ಕೂಡ ತಂದುಕೊಡುತ್ತೇನೆ ಎಂದು ಹೇಳಿದರು.
ದರ್ಶನ್‌ ಮೇಲೆ ನನಗೆ ಅತಿಯಾದ ಅಭಿಮಾನ. ಅವರಿಷ್ಟಪಟ್ಟರೆ ನಾನು ಮದುವೆಯಾಗಲೂ ಸಿದ್ಧ. ವಿಜಯಲಕ್ಷ್ಮಿ ಒಬ್ಬರೇ ಹೆಂಡತಿಯಲ್ಲ, ನಾನೂ ಕೂಡ ದರ್ಶನ್‌ ಪತ್ನಿ ಇದ್ದಂತೆ ಎಂದು ಹೇಳಿ ರಂಪಾಟ ಮಾಡಿದ ಅವರು, ರಕ್ತಸಂಬಂಧಿಗಳನ್ನು ಮಾತ್ರ ಭೇಟಿ ಮಾಡಲು ಅವಕಾಶ ಮಾಡಿಕೊಡುವುದಕ್ಕಿಂತ ನಮಂತವರೂ ಭೇಟಿ ಮಾಡಲು ಒಳಗೆ ಬಿಡಬೇಕು ಎಂದು ಹೇಳಿದರು.
ನಾನು ಗುಲ್ಬರ್ಗದ ಮೂಲದವಳು. ಬೆಂಗಳೂರಿನ ಆರ್‌.ಆರ್‌.ನಗರದಲ್ಲಿದ್ದೆ. ದರ್ಶನ್‌ ಜೈಲಿಗೆ ಹೋದ ದಿನದಿಂದ ಅವರ ಭೇಟಿಗಾಗಿ ಸತತ ಪ್ರಯತ್ನ ಮಾಡುತ್ತಿದ್ದೇನೆ. ಪೊಲೀಸರು ಒಳಗೆ ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ದರ್ಶನ್‌ ನೋಡದ ಹೊರತು ನಾನು ಇಲ್ಲಿಂದ ಹೋಗುವುದಿಲ್ಲ ಎಂದು ಮೊಂಡಾಟ ಮಾಡಿದರು.