ಗ್ಯಾರೆಂಟಿಗಳಿಂದ ರಾಜ್ಯದ ಜನತೆ ಖುಷಿಯಾಗಿದ್ದಾರೆ : ಸಿದ್ದರಾಮಯ್ಯ
ಬೆಂಗಳೂರು,ಫೆ.20- ವಿಧಾನಸಭಾ ಚುನಾವಣಾ ಪೂರ್ವದಲ್ಲಿ ನೀಡಿದ್ದ 5 ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಅದಕ್ಕೆ ಬೇಕಾದ ಹಣವನ್ನು ಒದಗಿಸಿ ಸಂಪೂರ್ಣ ಜಾರಿ ಮಾಡಿದ್ದೇವೆ. ಇದರಿಂದ ರಾಜ್ಯದ ಜನರು ಖುಷಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಬಲವಾಗಿ ಸಮರ್ಥಿಸಿಕೊಂಡರು.  ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವ ಕುರಿತು ನಡೆದ ಚರ್ಚೆಗೆ ಉತ್ತರ ನೀಡಿದ ಮುಖ್ಯಮಂತ್ರಿಗಳು, ವಿರೋಧಪಕ್ಷಗಳನ್ನು ಸಮಾಧಾನಪಡಿಸುವುದು ಹೇಗೆ, ಕಾಮಾಲೆ ಕಣ್ಣಿನವರಿಗೆ  ಎಲ್ಲವೂ ಹಳದಿಯಾಗಿಯೇ ಕಾಣುತ್ತದೆ ಎಂದರು.
ರಾಜ್ಯಸರ್ಕಾರದ ಗ್ಯಾರಂಟಿ ಯೋಜನೆಗಳು ಬಿಟ್ಟಿ ಭಾಗ್ಯ ಎಂದು ಟೀಕಿಸುತ್ತಾರೆ. ಎಲ್ಲ ಜಾತಿ, ಎಲ್ಲ ಧರ್ಮದ ಬಡವರಿಗೆ ಪ್ರಯೋಜನ ದೊರೆಯುತ್ತಿದೆ. ರಾಷ್ಟ್ರಕವಿ ಕುವೆಂಪು ಹೇಳಿದಂತೆ ಸರ್ವೋದಯ ಸರ್ವರಲ್ಲೂ ಇರಬೇಕು. ಆದರೆ ಸಬ್ ಕ ಸಾಥ್, ಸಬ್ ಕ ವಿಕಾಸ್, ಸಬ್ ಕ ವಿಶ್ವಾಸ್ ಎಂದು ಹೇಳಿದರು. ಹೇಳುವುದು ಒಂದು, ಮಾಡುವುದು ಇನ್ನೊಂದು ಎಂದು ಕೇಂದ್ರ ಸರ್ಕಾರದ ವಿರುದ್ಧ ಟೀಕಿಸಿದರು.
ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರು ರಾಜ್ಯ ಸರ್ಕಾರವನ್ನು ಗಾಳಿಯಿಲ್ಲದೆ ಕೆಟ್ಟು ನಿಂತಿರುವ ಬಸ್‍ಗೆ ಹೋಲಿಸಿದ್ದಾರೆ. ಆದರೆ 2019 ರಿಂದ 2023 ರ ನಡುವಿನ ಅವರ ಸರ್ಕಾರ ದ್ವೇಷ ತುಂಬಿದ, ತುಕ್ಕು ಹಿಡಿದ ಬಸ್ಸಾಗಿತ್ತು. ಮುಂದಕ್ಕೆ ಹೋಗಲಿಲ್ಲ. ಆ ಬಸ್ಸು ಮುಂದೆ ಹೋದರೆ ವಿಷದ ಹೊಗೆ ಉಗುಳುತ್ತದೆ ಎಂದು ಜನರ ಪಕ್ಕಕ್ಕೆ ತಳ್ಳಿದರು ಎಂದು ಲೇವಡಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನೀವು 158 ಭರವಸೆಗಳನ್ನು ಈಡೇರಿಸಿದ್ದರೆ ಜನರು ಏಕೆ 2018 ರಲ್ಲಿ ನಿಮ್ಮನ್ನು ಪಕ್ಕಕ್ಕೆ ತಳ್ಳಿದರು? ಭರವಸೆಗಳ ಈಡೇರಿಕೆ ಕೇವಲ ಕಾಗದದ ಮೇಲಿತ್ತು ಎಂದು ತಿರುಗೇಟು ನೀಡಿದರು. ಉತ್ತರ ಮುಂದುವರೆಸಿದ ಸಿದ್ದರಾಮಯ್ಯ, ರಾಜ್ಯಸರ್ಕಾರ ಜಾರಿಗೆ ತಂದ ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯಡಿ 160 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಫೆ.13 ರವರೆಗೆ 2,208 ಕೋಟಿ ಖರ್ಚಾಗಿದೆ. ಇದು ಸುಳ್ಳೆ ಎಂದು ಪ್ರಶ್ನಿಸಿದರು.
ಆಗ ಆರ್.ಅಶೋಕ್‍ರವರು, ಜೆಸಿಬಿಯಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸಿರುವುದು ಸುಳ್ಳೆ ಎಂದು ಮರುಪ್ರಶ್ನಿಸಿದರು.ಬಸ್ ಸಿಗದೆ ವಿದ್ಯಾರ್ಥಿಗಳು ಹೋಗಿರುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಶಕ್ತಿ ಯೋಜನೆಯಡಿ ಪ್ರಯಾಣಿಸಿರು ವುದನ್ನು ಒಪ್ಪಿಕೊಳ್ಳುವುದಕ್ಕೆ ಸಿದ್ದರಿಲ್ಲವಲ್ಲ ಎಂದು ತಿರುಗೇಟು ನೀಡಿದರು. 200 ಯುನಿಟ್‍ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗೆ ಫೆ. 13ರವರೆಗೆ 5,168 ಕೋಟಿಯನ್ನು ಇಂಧನ ಇಲಾಖೆಗೆ ಬಿಡುಗಡೆ ಮಾಡಲಾಗಿದೆ. ಈ ಯೋಜನೆಯಲ್ಲಿ 1.60 ಕೋಟಿ ಕುಟುಂಬಗಳಿಗೆ ಇದರ ಪ್ರಯೋಜನ ದೊರೆತಿದೆ ಎಂದರು.
ಸಿಎಂ ಉತ್ತರಕ್ಕೆ ಅತೃಪ್ತಿ : ಬಿಜೆಪಿ – ಜೆಡಿಎಸ್ ಸಭಾತ್ಯಾಗ
ಅನ್ನಭಾಗ್ಯದಡಿ 5 ಕೆಜಿ ಅಕ್ಕಿಯನ್ನು ನೀಡಿ ಹಸಿವು ಮುಕ್ತ ರಾಜ್ಯ ಮಾಡುವುದು ಗುರಿಯಾಗಿತ್ತು. ಅಕ್ಕಿ ಸಿಗದ ಕಾರಣಕ್ಕೆ ಪ್ರತಿ ಫಲಾನುಭವಿಗೆ ಮಾಸಿಕ 170 ರೂ. ನೀಡುತ್ತಿದ್ದೇವೆ. 4 ಕೋಟಿ 38 ಲಕ್ಷ ಜನರಿಗೆ ಈ ಹಣ ನೀಡಿದ್ದೇವೆ ಎಂದು ಹೇಳಿದರು. ಫೆ.13 ರವರೆಗೆ 8,554 ಕೋಟಿ ರೂ. ಗಳನ್ನು ಇದಕ್ಕಾಗಿ ಖರ್ಚು ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2 ರೂ.ನಂತೆ ನೀಡಲಾಗುತ್ತಿದ್ದು, 1.18 ಕೋಟಿ ಮಹಿಳೆಯರಿಗೆ ಪ್ರಯೋಜನವಾಗಿದೆ.
ಫೆ.13 ರವರೆಗೆ 13,352 ಕೋಟಿ ರೂ. ನೀಡಲಾಗಿದೆ. 2022-23ನೇ ಸಾಲಿನಲ್ಲಿ ಪದವಿ ತೇರ್ಗಡೆಯಾದ ನಿರುದ್ಯೋಗಿಗೆ ಮಾಸಿಕ 3 ಸಾವಿರ ರೂ. , ಡಿಪೆÇ್ಲಮಾ ತೇರ್ಗಡೆಯಾದವರಿಗೆ 1,500 ರೂ. ನೀಡಲಾಗುತ್ತಿದ್ದು, 7 ಕೋಟಿ ರೂ. 34 ಲಕ್ಷ ಯುವಕರಿಗೆ ಹಣ ವರ್ಗಾವಣೆಯಾಗಿದೆ. ಯಾವುದೇ ಮಧ್ಯವರ್ತಿಗಳಿಲ್ಲ. ಈ ವರ್ಷ ಗ್ಯಾರಂಟಿ ಯೋಜನೆಗಾಗಿ 39,675 ಕೋಟಿ ರೂ. ಒದಗಿಸಲಾಗಿದೆ ಎಂದು ಹೇಳಿದರು.
ಕೊಟ್ಟ ಮಾತಿನಂತೆ ನಡೆದುಕೊಂಡಿರುವ ಸರ್ಕಾರವಿದ್ದರೆ ಅದು ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಎಂದು ಸಮರ್ಥಿಸಿಕೊಂಡರು. ಹಾಲು ಉತ್ಪಾದನೆ ಕಡಿಮೆಯಾಗಿದೆ ಎಂದು ಅಶೋಕ್‍ರವರು ಹೇಳಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಹಾಲಿನ ಪ್ರಮಾಣ ಹೆಚ್ಚಳವಾಗಿದೆ ಎಂದು ಅಂಕಿಅಂಶಗಳ ಸಹಿತ ವಿವರಿಸಿದ ಅವರು, ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‍ಗೆ 5 ರೂ. ಪ್ರೋತ್ಸಾಹ ಧನ ನೀಡಲು 9 ತಿಂಗಳ ಅವಗೆ 1,772 ಕೋಟಿ ರೂ. ಒದಗಿಸಲಾಗಿತ್ತು. 971 ಕೋಟಿ ರೂ. ಈತನಕ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.