ಆರ್‌ಎಸ್‌‍ಎಸ್‌‍ ಕಚೇರಿಗೆ ನುಗ್ಗಿ ಅನುಚಿತ ವರ್ತಿಸಿದ ಪೋಲಿಸರು ಕ್ಷಮೆಯಾಚಿಸಬೇಕು : ವಿಜಯೇಂದ್ರ
      : 
ಬೆಂಗಳೂರು,ಸೆ.16-ಪಾಂಡವಪುರದ ಆರ್‌ಎಸ್‌‍ಎಸ್‌‍ ಕಚೇರಿಗೆ ಪೋಲಿಸರು ನುಗ್ಗಿದ ಘಟನೆ ಅತ್ಯಂತ ಖಂಡನೀಯ. ಸರ್ಕಾರ ಈ ಕೂಡಲೇ ಘಟನೆಯ ಕುರಿತು ಕ್ಷಮೆಯಾಚಿಸಲಿ ಪೊಲೀಸ್‌‍ ದರ್ಪ ಮೆರೆದ ಅಧಿಕಾರಿಗಳನ್ನು ಅಮಾನತ್ತಿನಲ್ಲಿಡಲಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಆರ್‌ಎಸ್‌‍ಎಸ್‌‍ ಕಚೇರಿಗೆ ಪೊಲೀಸರು ನುಗ್ಗಿರುವ ಘಟನೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸಂವಿಧಾನ ವಿರೋಧಿ ಕ್ರಮ ಹಾಗೂ ಹಿಂದೂ ಸಮಾಜವನ್ನು ಪ್ರಚೋದಿಸುವ ನಡವಳಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊನ್ನೆ ಗಣೇಶೋತ್ಸವ ಮೆರವಣಿಗೆಯ ಮೇಲೆ ನಡೆದ ಗಲಭೆಯಿಂದಾಗಿ ನಾಗಮಂಗಲ ಇನ್ನು ಸಹಜ ಸ್ಥಿತಿಯತ್ತ ಮರಳುತ್ತಿಲ್ಲ ಈ ನಡುವೆ ಬೆಂಕಿಗೆ ತುಪ್ಪ ಸುರಿದಂತೆ ಪೋಲಿಸರು ನಿನ್ನೆ ರಾತ್ರಿ ಪಾಂಡವಪುರದ ಆರ್‌.ಎಸ್‌‍.ಎಸ್‌‍ ಕಚೇರಿಗೆ ನುಗ್ಗಿ ಅನುಚಿತ ವರ್ತನೆ ತೋರಿದ್ದಾರೆ, ಪೊಲೀಸರ ಮೂಲಕ ಕಾಂಗ್ರೆಸ್‌‍ ಸರ್ಕಾರ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನಪಿಸುವ ದಾಟಿಯಲ್ಲಿ ವರ್ತಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆಯೋ ಅಥವಾ ಹಿಂದೂ ಮನಸ್ಥಿತಿಯ ವಿರೋಧಿ ಸರ್ಕಾರದ ನೆರಳಿನಲ್ಲಿದ್ದೇವೆಯೋ ಎಂಬ ಆತಂಕ ಹಿಂದೂ ಸಮಾಜವನ್ನು ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನೈಜ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಭಾರತೀಯ ಸಮಾಜ ಕಟ್ಟುವ ಉದಾತ್ತ ಉದ್ದೇಶದಿಂದ ಜನತಳೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌‍ಎಸ್‌‍)ವನ್ನು ನಿರ್ಬಂಧಿಸಲು ಕಾಂಗ್ರೆಸ್‌‍, ನೆಹರು ಕಾಲದಿಂದಲೂ ಯತ್ನಿಸುತ್ತಲೇ ಬಂದಿದೆ ಎಂದು ಆರೋಪಿಸಿದ್ದಾರೆ.
ಸಮರ್ಪಣೆಯ ಬದ್ಧತೆ, ತ್ಯಾಗದ ಪರಿಪೂರ್ಣತೆಯನ್ನು ಮೈಗೂಡಿಸಿಕೊಂಡಿರುವ ಕೋಟ್ಯಾಂತರ ಸ್ವಯಂಸೇವಕರ ಮಹಾಪಡೆಯನ್ನು ಹೊಂದಿರುವ ಆರ್‌ಎಸ್‌‍ಎಸ್‌‍, ದಬ್ಬಾಳಿಕೆ ಎದುರಾದಷ್ಟು ಹೆಮರವಾಗಿ ಬೆಳೆಯುತ್ತಲೇ ಇರುತ್ತದೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಅರಿತು ನಡೆದರೆ ಒಳಿತು ಎಂದು ಅವರು ಎಚ್ಚರಿಸಿದ್ದಾರೆ.