ಸರ್ಕಾರಿ ನೌಕರರಿಂದ ಅಂಚೆ ಮತದಾನಕ್ಕೂ ಮೀನಾಮೇಷ
ಬೆಂಗಳೂರು,ಏ.22-ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕು ಎಂದು ಸರ್ಕಾರ ಬೊಬ್ಬೆ ಹೊಡೆದುಕೊಳ್ಳುತ್ತಿದ್ದರೂ ಸರ್ಕಾರಿ ನೌಕರರೇ ಮತದಾನಕ್ಕೆ ಮನಸ್ಸು ಮಾಡದಿರುವ ವಿಚಾರ ಇದೀಗ ಬಹಿರಂಗಗೊಂಡಿದೆ.
ಮೂರು ದಿನ ಅಂಚೆ ಮತದಾನಕ್ಕೆ ಅವಕಾಶ ಇದ್ದರು ಹಕ್ಕು ಚಲಾಯಿಸಲು ಸರ್ಕಾರಿ ನೌಕರರು ಹಿಂದೇಟು ಹಾಕಿರುವುದು ಗೊತ್ತಾಗಿದೆ. ಕಳೆದ ಶುಕ್ರವಾರದಿಂದ ಅಂಚೆ ಮತದಾನ ಆರಂಭವಾಗಿದೆ ನಿನ್ನೆ ಭಾನುವಾರದ ರಜೆ ದಿನವಾಗಿದ್ದರೂ ಸಾಕಷ್ಟು ಮಂದಿ ಸರ್ಕಾರಿ ನೌಕರರು ತಮ್ಮ ಹಕ್ಕು ಚಲಾಯಿಸದೆ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ.
ಅಂಚೆ ಮತದಾನಕ್ಕೆ ವಿವಿಧ ಇಲಾಖೆಗಳ 1342 ಮಂದಿ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಸಿಕೊಂಡಿದ್ದರು. ಆದರೆ ಅಂಚೆ ಮತದಾನ ಮಾಡಿರುವುದು ಮಾತ್ರ ಕೇವಲ 426 ಮಂದಿ. ನಗರದ ಮೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೇವಲ ಶೇ.31 ರಷ್ಟು ಮಂದಿ ಮಾತ್ರ ಮತದಾನ ಮಾಡಿದ್ದಾರೆ.
ಚುನಾವಣಾ ಕರ್ತವ್ಯ, ಅಗತ್ಯ ಸೇವೆಯಲ್ಲಿ ಕೆಲಸ ನಿರ್ವಹಿಸುತ್ತಿರೋ ಸಿಬ್ಬಂದಿಗಳಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು ಆದರೆ ನಗರದ 1342 ಮಂದಿ ನೌಕರರಲ್ಲಿ 916 ಮಂದಿ ಮತದಾನ ಮಾಡದೇ ಬೇಜವಾಬ್ದಾರಿತನ ಪ್ರದರ್ಶಿಸಿರುವುದು ಬೆಳಕಿಗೆ ಬಂದಿದೆ.ಮತದಾನದ ವಿವರ