ಕಲ್ಯಾಣ ಕರ್ನಾಟಕ ವಿಮೋಚನಾ ದಿನ : ಕಲಬುರಗಿಯಲ್ಲಿ ಸಿಎಂ ಧ್ವಜಾರೋಹಣ
   
ಬೆಂಗಳೂರು,ಸೆ.17-ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಅಂಗವಾಗಿ ಆ ಭಾಗದ 6 ಜಿಲ್ಲೆಗಳಲ್ಲೂ ವಿಭಿನ್ನ ಹಾಗೂ ವಿಶಿಷ್ಟವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಲಬುರಗಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರಧ್ವಜಾರೋಹಣ ನೆರವೇರಿಸಿದ್ದು, ಬೀದರ್‌, ಬಳ್ಳಾರಿ, ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಗಳಲ್ಲಿ ಸಚಿವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಬಳ್ಳಾರಿಯಲ್ಲಿ ಪೌರಾಡಳಿತ ಸಚಿವ ರಹೀಂಖಾನ್‌ ಧ್ವಜಾರೋಹಣ ನೆರವೇರಿಸಿ ಗೌರವರಕ್ಷೆ ಸ್ವೀಕರಿಸಿದರು. ಬೀದರ್‌ನಲ್ಲಿ ಉಸ್ತುವಾರಿ ಸಚಿವ ಈಶ್ವರಖಂಡ್ರೆ, ಕೊಪ್ಪಳದಲ್ಲಿ ಸಚಿವ ಶಿವರಾಜ್‌ ತಂಗಡಗಿ, ರಾಯಚೂರಿನಲ್ಲಿ ಡಾ.ಶರಣಪ್ರಕಾಶ್‌ ಪಾಟೀಲ್‌ ಸೇರಿದಂತೆ ಹಲವು ಕಡೆ ಧ್ವಜಾರೋಹಣ ಹಾಗೂ ಗೌರವರಕ್ಷೆ ಸ್ವೀಕಾರ ಕಾರ್ಯಕ್ರಮಗಳು ನಡೆದವು.
ಕಲಬುರಗಿಯಲ್ಲಿ ಹೈದರಾಬಾದ್‌-ಕರ್ನಾಟಕ ವಿಮೋಚನಾ ದಿನದ ಸುವರ್ಣ ಮಹೋತ್ಸವ ಹಾಗೂ 371 ಜೆ ವಿಧಿಯ ಅನುಷ್ಟಾನ ದಶಮಾನೋತ್ಸವ ಸಂದರ್ಭದ ಜೊತೆಯಲ್ಲೇ ರಾಜ್ಯ ಸಚಿವ ಸಂಪುಟ ಸಭೆಯನ್ನು ಆಯೋಜಿಸಲಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಸಂಪುಟದ ಎಲ್ಲಾ ಸಚಿವರು ಕಾರ್ಯಕ್ರಮಗಳಲ್ಲಿ ಹಾಗೂ ಸಚಿವ ಸಂಪುಟ ಸಭೆಗಳಲ್ಲಿ ಭಾಗವಹಿಸಿದ್ದರು.
