ಎಸ್‌ಐಟಿ ವರದಿ ಬಂದ ನಂತರ ಮುಲಾಜಿಲ್ಲದೆ ಕ್ರಮ : ಕುಮಾರಸ್ವಾಮಿ
ಶಿವಮೊಗ್ಗ,ಏ.29-ಹಾಸನದ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್‌ ರೇವಣ್ಣ ಅವರ ಮೇಲೆ ಆರೋಪ ಕೇಳಿಬಂದಿರುವುದು ಇಡೀ ಸಮಾಜಕ್ಕೆ ಮುಜುಗರ ತರುವಂತದ್ದಾಗಿದ್ದು, ರಾಜ್ಯಸರ್ಕಾರ ರಚಿಸಿರುವ ಎಸ್‌ಐಟಿ ತನಿಖಾ ವರದಿ ಬಂದ ನಂತರ ಮುಲಾಜಿಲ್ಲದೆ ಜೆಡಿಎಸ್‌ ಕ್ರಮ ಕೈಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬಕ್ಕಷ್ಟೇ ಮುಜುಗರವಾಗುವುದಿಲ್ಲ, ಇಡೀ ಸಮಾಜಕ್ಕೆ ಮುಜುಗರವಾಗುವಂತಹುದು. ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲಿದೆ ಎಂದರು. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಅನುಭವಿಸಲೇಬೇಕು. ಉಪ್ಪು ತಿಂದವರು ನೀರು ಕುಡಿಯಲೇಬೇಕಲ್ಲವೇ ಎಂದು ಹೇಳಿದರು.
ತನಿಖೆಯ ವಿಚಾರದಲ್ಲಿ ನಾನಾಗಲಿ, ಮಾಜಿ ಪ್ರಧಾನಿ ದೇವೇಗೌಡರಾಗಲಿ ಯಾವುದೇ ರೀತಿಯ ಪ್ರಭಾವ ಬೀರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇಂತಹ ಘಟನೆಗಳು ಯಾವುದೇ ಕಾರಣಕ್ಕೂ ನಡೆಯಬಾರದು ಎಂದರು. ದೇವೆಗೌಡರು ಮತ್ತು ನಾನು ಹಲವು ಹೆಣ್ಣುಮಕ್ಕಳ ಕಷ್ಟ, ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸಿದ್ದೇವೆ.
ಹೆಣ್ಣು ಮಕ್ಕಳನ್ನು ಅತ್ಯಂತ ಗೌರವದಿಂದ ಕಂಡಿದ್ದೇವೆ. ಹಾಸನದ ಪೆನ್‌ಡ್ರೈವ್‌ ಪ್ರಕರಣದಿಂದ ಪಕ್ಷದ ಮೇಲೆ ಯಾವುದೇ ರೀತಿಯ ಪರಿಣಾಮವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಎಸ್‌ಐಟಿ ತನಿಖೆಯು ಪಾರದರ್ಶಕವಾಗಿ ನಡೆಯಲಿ, ಪ್ರಕರಣದಲ್ಲಿ ರಾಜಕೀಯ ಸಂಚಿರುವುದು ಕೂಡ ಬಯಲಾಗಲಿದೆ ಎಂದು ಅವರು ತಿಳಿಸಿದರು.