ಹೊಳೇನರಸಿಪುರದ ಎಚ್‌.ಡಿ.ರೇವಣ್ಣ ನಿವಾಸದಲ್ಲಿ ಎಸ್‌‍ಐಟಿ ತಂಡ ಸ್ಥಳ ಮಹಜರು
ಹಾಸನ, ಮೇ.4-ಪ್ರಜ್ವಲ್‌ ರೇವಣ್ಣಗೆ ಸೇರಿದ್ದು ಎನ್ನಲಾದ ಪೆನ್‌ಡ್ರೈವ್‌ ಪ್ರಕರಣ ಸಂಬಂಧ ಸ್ಥಳ ಮಹಜರಿಗೆ ಎಸ್‌‍ಐಟಿ ತಂಡ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌‍ ಬಂದೋಬಸ್ತ್‌ ಮಾಡಲಾಗಿದೆ.
ಹೊಳೇನರಸಿಪುರದಲ್ಲಿರುವ ಎಚ್‌.ಡಿ.ರೇವಣ್ಣ ಅವರ ನಿವಾಸಕ್ಕೆ ನಗರ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಎಸ್‌‍ಐಟಿ ತಂಡ ಆಗಮಿಸಲಿರುವ ಹಿನ್ನೆಲೆಯಲ್ಲಿ ಇನ್ಸ್ ಪೆಕ್ಟರ್‌ ಸುರೇಶ್‌ಕುಮಾರ್‌ ಹಾಗೂ ಸಬ್‌ಇನ್‌್ಸಪೆಕ್ಟರ್‌ ಅಜಯ್‌ಕುಮಾರ್‌ ಬೆಳಗ್ಗೆಯೇ ಭೇಟಿ ನೀಡಿ ಬಂದೋಬಸ್ತ್‌ ಮಾಡಿದ್ದರು.
ಇನ್‌ಸ್ಪೆಕ್ಟರ್‌ ಹಾಗೂ ಸಬ್‌ ಇನ್‌ಸ್ಪೆಕ್ಟರ್‌ ಜೊತೆ ಇಬ್ಬರು ಮಹಿಳಾ ಕಾನ್ಸಸ್ಟೇಬಲ್‌ಗಳು ಇದ್ದರು.ಸಂತ್ರಸ್ತ ಮಹಿಳೆಯ ಸಮುಖದಲ್ಲಿ ಎಸ್‌‍ಐಟಿ ತಂಡ ಸ್ಥಳ ಮಹಜರು ನಡೆಸಲಿದೆ. ರೇವಣ್ಣ ನಿವಾಸದ ಬಳಿ ಬ್ಯಾರಿಕೇಡ್‌ ಹಾಕಿ ಯಾರೂ ಬಾರದಂತೆ ಪೊಲೀಸರು ಬಂದೋಬಸ್ತ್‌ ಮಾಡಿದ್ದರು.
ಹಾಸನದ ಆರ್‌.ಸಿ. ರಸ್ತೆಯಲ್ಲಿರುವ ಸಂಸದರ ನಿವಾಸದಲ್ಲೂ ಸ್ಥಳ ಮಹಜರು ಮಾಡಲಿರುವ ಹಿನ್ನೆಲೆಯಲ್ಲಿ ಅಲ್ಲಿಯೂ ಸಹ ಪೊಲೀಸ್‌‍ ಬಂದೋಬಸ್ತ್‌ ಮಾಡಲಾಗಿದೆ.
ಸಾಕ್ಷಿ ನಾಶದ ಆತಂಕ- ಗೇಟ್‌ಗೆ ಬೀಗ :ಪ್ರಜ್ವಲ್‌ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಎಂಪಿ ನಿವಾಸಕ್ಕೆ ಬೀಗ ಹಾಕಲಾಗಿದೆ. ಸಾಕ್ಷ್ಯನಾಶದ ಆತಂಕದ ಸಂಬಂಧ ಎಂಪಿ ನಿವಾಸದ ಆವರಣಕ್ಕೆ ಪ್ರವೇಶ ನಿರ್ಬಂಧ ವಿಧಿಸಿ ಪೊಲೀಸರು ಬೀಗ ಹಾಕಿದ್ದಾರೆ.