ದೇವರಾಜೇಗೌಡ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್‌‍ ದಾಖಲಿಸುತ್ತೇನೆ : ಶ್ರೇಯಸ್‌‍ ಪಟೇಲ್‌
ಹಾಸನ, ಮೇ 7-ಬಿಜೆಪಿ ಮುಖಂಡ ದೇವರಾಜೇಗೌಡ ಅವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಮ್ಮ ಮೇಲೆ ಹಾಗೂ ನಮ್ಮ  ನಾಯಕರು ಮೇಲೆ ಸುಳ್ಳಿನ ಮಳೆ ಸುರಿಸುತ್ತಿದ್ದಾರೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌‍ ಅಭ್ಯರ್ಥಿ ಶ್ರೇಯಸ್‌‍ ಪಟೇಲ್‌ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ದೇವರಾಜೇಗೌಡ ಅವರು ಹೇಳಿರುವುದು ಶುದ್ದಸುಳ್ಳು. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದರು.
ನಾನು ಯಾರನ್ನು ಭೇಟಿ ಮಾಡಿಲ್ಲ. ಒಂದು ವೇಳೆ ನಾನು ಭೇಟಿ ಮಾಡಿದ್ದೇನೆ ಎಂಬ ಸಂಶಯವಿದ್ದರೆ, ಸ್ಕೈಬರ್ಡ್‌ ಹೋಟೆಲ್‌ನಲ್ಲಿ ಸಿಸಿಟಿವಿ ವಿಡಿಯೋ ಇದೆ ಪರಿಶೀಲನೆ ನಡೆಸಲಿ ಎಂದು ಕಿಡಿಕಾರಿದರು.ಪ್ರಜ್ವಲ್‌ ರೇವಣ್ಣ ಅವರಿಗೆ ಸಂಬಂಧಿಸಿದ ಪೆನ್‌ಡ್ರೈವ್‌ ಪ್ರಕರಣದ ಬಗ್ಗೆ ಹಾಸನ, ಹೊಳೆನರಸೀಪುರದಲ್ಲಿ ಬಹಿರಂಗವಾಗಿ ಚರ್ಚೆಗೆ ಬರಲಿ. ಅದರಲ್ಲಿ ನನ್ನ ಪಾತ್ರ ಇದೆ ಎಂದು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರು.
ದೇವರಾಜೇಗೌಡ ಅವರು ಎಸ್‌‍ಐಟಿ ತನಿಖೆ ದಿಕ್ಕು ತಪ್ಪಿಸುತ್ತಿದ್ದಾರೆ. ಅವರು ಬಿಜೆಪಿ, ಜೆಡಿಎಸ್‌‍, ಕಾಂಗ್ರೆಸ್‌‍ ಯಾವ ಪಕ್ಷದಲ್ಲಿ ಇದ್ದಾರೆ. ಈ ಪ್ರಕರಣ ಸರಿಯಾಗಿ ತನಿಖೆ ನಡೆಯಬೇಕು.ದೇವರಾಜೇ ಗೌಡ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್‌‍ ದಾಖಲಿಸುತ್ತೇನೆ. ಈಗಾಗಲೇ ವಕೀಲರ ಜೊತೆ ಮಾತನಾಡಿದ್ದೇನೆ. ನಾನು ಯಾವುದೇ ಕಳಂಕ ಬರುವ ಕೆಲಸ ಮಾಡಿಲ್ಲ. ದೇವರಾಜೇಗೌಡ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ.
ಪೆನ್‌ಡ್ರೈವ್‌ ವಿಚಾರ ಮಾತನಾಡಲು ಅಸಹ್ಯ ಆಗುತ್ತೆ, ನಾನು ಸುಸಂಸ್ಕೃತ ಕುಟುಂಬದಿಂದ ಬಂದವನು. ಅಕ್ಕ-ತಂಗಿಯರ ಜೊತೆ ಬೆಳೆದವನು. ಈ ಕೊಚ್ಚೆ ರಾಜಕಾರಣಕ್ಕೆ ದೇವರಾಜೇಗೌಡ ಕಾರಣ. ಎಸ್‌‍ಐಟಿ ದಿಕ್ಕು ತಪ್ಪಿಸಲು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.