ಪ್ರಜ್ವಲ್‌ ರೇವಣ್ಣ ಇಂದು ರಾತ್ರಿ ಅಥವಾ ನಾಳೆ ಬೆಂಗಳೂರಿಗೆ ಬರುವ ನಿರೀಕ್ಷೆ
ಬೆಂಗಳೂರು, ಮೇ.7-ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್‌ ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ನಗರಕ್ಕೆ ಬರುವ ನಿರೀಕ್ಷೆಯಿದೆ. ಮೊದಲ ಹಂತದ ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ಮುಗಿದ ನಂತರ ಪ್ರಜ್ವಲ್‌ ರೇವಣ್ಣ ಅವರು ಜರ್ಮನಿಗೆ ತೆರಳಿದ್ದರು.
ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಜ್ವಲ್‌ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆಯನ್ನು ಸರ್ಕಾರ ಎಸ್‌‍ಐಟಿ ವಹಿಸಿದೆ. ಎಸ್‌‍ಐಟಿ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಂಡ ರಚಿಸಿಕೊಂಡು ತನಿಖೆ ಕೈಗೊಂಡು ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್‌ಗೆ ನೋಟಿಸ್‌‍ ನೀಡಿದ್ದರು.
ಪ್ರಜ್ವಲ್‌ ಪರ ವಕೀಲರು ವಿಚಾರಣೆಗೆ ಕಾಲಾವಕಾಶ ನೀಡುವಂತೆ ಕೋರಿದ್ದರೂ ಎಸ್‌‍ಐಟಿ ಅವಕಾಶ ನೀಡಲಿಲ್ಲ. ನಂತರದಲ್ಲಿ ಲುಕ್‌ಔಟ್‌ ನೋಟಿಸ್‌‍ ನೀಡಿ, ಪ್ರಜ್ವಲ್‌ ಎಲ್ಲಿದ್ದಾರೆಂಬ ಬಗ್ಗೆ ಪತ್ತೆಕಾರ್ಯ ಮುಂದುವರೆಸಿದ್ದರು.
ಈ ನಡುವೆ ಬ್ಲೂ ಕಾರ್ನರ್‌ ನೋಟಿಸ್‌‍ ಸಹ ಪ್ರಜ್ವಲ್‌ ವಿರುದ್ಧ ಜಾರಿ ಮಾಡಿದ್ದರು.ಎಸ್‌‍ಐಟಿ ಪ್ರಜ್ವಲ್‌ ಬಂಧನಕ್ಕೆ ಸಜ್ಜಾಗಿದ್ದು, ಅವರು ನಗರಕ್ಕೆ ಬರುತ್ತಿದ್ದಂತೆ ಬಂಧಿಸಲಿದ್ದಾರೆ.ಪ್ರಜ್ವಲ್‌ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದ್ದು, ಹೊಳೆನರಸೀಪುರ ನಗರ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾದರೆ, ಸಿಐಡಿಯಲ್ಲಿ ಮಹಿಳೆಯೊಬ್ಬರು ಅತ್ಯಾಚಾರ ದೂರು ನೀಡಿದ್ದಾರೆ.