ಪರಪ್ಪನ ಅಗ್ರಹಾರ ಜೈಲಲ್ಲಿ ಊಟ-ನಿದ್ದೆಯಿಲ್ಲದೆ ರಾತ್ರಿ ಕಳೆದ ಹೆಚ್‌.ಡಿ.ರೇವಣ್ಣ
ಬೆಂಗಳೂರು,ಮೇ9-ಮಹಿಳಾ ಅಪಹರಣ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಮಾಜಿ ಸಚಿವ ಹೆಚ್‌.ಡಿ.ರೇವಣ್ಣ ಮೊದಲ ದಿನ ಊಟ ಹಾಗೂ ನಿದ್ದೆಯಿಲ್ಲದೆ ಕಳೆದಿದ್ದಾರೆ. ಸೆಂಟ್ರಲ್‌ ಜೈಲಿನ ಕ್ವಾರಂಟೈನ್‌ ಸೆಲ್‌ನಲ್ಲಿ ಒಂದು ರಾತ್ರಿ ಕಾಲ ಕಳೆದಿರುವ ರೇವಣ್ಣ, ಕಳೆದ ರಾತ್ರಿ ನೀಡಿದ್ದ ಮುದ್ದೆ, ಚಪಾತಿ, ರೈಸ್‌, ಸಾಂಬಾರ್‌ ತಡವಾಗಿ ಸೇವಿಸಿದ್ದಾರೆ. ಇತರೆ ಕೈದಿಗಳಂತೆ ಜೈಲಿನಲ್ಲಿ ನೀಡುವ ಊಟವನ್ನೇ ಅವರು ಸೇವಿಸಿದ್ದಾರೆ.
ರಾತ್ರಿ ತಡವಾಗಿ ಊಟ ಮಾಡಿ ಮೌನಕ್ಕೆ ಶರಣಾಗಿದ್ದರು. ರಾತ್ರಿ 1 ಗಂಟೆಯವರೆಗೆ ನಿದ್ರೆ ಮಾಡದೆ ಏಕಾಂಗಿಯಾಗಿ ತಮಗೆ ಬಂದೊಗಿದ ಪರಿಸ್ಥಿತಿಯ ಬಗ್ಗೆ ಸಂಕಟ ಅನುಭಸುತ್ತಿದ್ದರು. ಸುಮಾರು ಹೊತ್ತಿನ ನಂತರ ಜೈಲಿನ ಕೊಠಡಿಯಲ್ಲಿ ನಿದ್ರೆಗೆ ಜಾರಿದರು ಎಂದು ಜೈಲಿನ ಮೂಲಗಳು ತಿಳಿಸಿವೆ.
ರೇವಣ್ಣ ಆರೋಗ್ಯ ಸರಿ ಇಲ್ಲದ ಕಾರಣ ರಾತ್ರಿ ಜೈಲಾಧಿ ಕಾರಿಗಳು ಅವರ ಮೇಲೆ ಹೆಚ್ಚು ನಿಗಾ ಇಟ್ಟಿದ್ದರು. ರೇವಣ್ಣ ಇದ್ದ ಕೊಠಡಿ ಬಳಿ ಓರ್ವ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಇಂದು ಬೆಳಗ್ಗೆ 5.30ಕ್ಕೆ ನಿದ್ರೆಯಿಂದ ಎದಿದ್ದಾರೆ. ನಂತರ ಎದ್ದು ಎಂದಿನಂತೆ ಜೈಲಿನಲ್ಲೇ ವಾಯೂ ವಿಹಾರ ನಡೆಸಿ ಪೇಪರ್‌ ಓದಿ ಪುಳಿಯೊಗರೆ ಸೇವಿಸಿದ್ದಾರೆ.
ಇದಕ್ಕೂ ಮುನ್ನ ನಿನ್ನೆ ಸಂಜೆ 04:30ರ ಸುಮಾರಿಗೆ ಮುಖ್ಯ ದ್ವಾರದ ಮೂಲಕ ರೇವಣ್ಣ ಜೈಲಿನ ಒಳಗೆ ಪ್ರವೇಶಿಸಿದ್ದರು. ಜೈಲಿನ ಒಳಗೆ ಹೋದ ರೇವಣ್ಣಗೆ ಮೊದಲು ಪ್ರಾಥಮಿಕ ಆರೋಗ್ಯ ತಪಾಸಣೆ ಮಾಡಲಾಯಿತು. ವಿಚಾರಣಾಧೀನ ಕೈದಿ ನಂಬರ್‌ 4567 ನಂಬರ್‌ ನೀಡಿ ವಿಐಪಿ ಸೆಲ್‌ನಲ್ಲಿ ಇರಿಸಲಾಯಿತು.
ಮೈಸೂರು ಜಿಲ್ಲೆ ಕೆ.ಆರ್‌.ನಗರದ ಮಹಿಳೆಯೊಬ್ಬರ ಅಪಹರಣ ಪ್ರಕರಣ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಹಿನ್ನಲೆಯಲ್ಲಿ ಹೆಚ್‌.ಡಿ.ರೇವಣ್ಣ ಅವರನ್ನು ಎಸ್‌ಐಟಿ ಬಂಧಿಸಿತ್ತು. ಕಸ್ಟಡಿ ಅವಧಿ ಅಂತ್ಯ ಬಳಿಕ 17ನೇ ಎಸಿಎಂಎಂ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು.