ಬಿಜೆಪಿಯ ಐಟಿ ಸೆಲ್‌ನಲ್ಲಿ ಆಟ ಆಡುವ ಮಕ್ಕಳನ್ನು ತಂದು ಕೂರಿಸಿದಂತಿದೆ : ಕಾಂಗ್ರೆಸ್
ಬೆಂಗಳೂರು,ಮೇ 15-ಬಿಜೆಪಿಯ ಐಟಿ ಸೆಲ್‌ನಲ್ಲಿ ಆಟ ಆಡುವ ಮಕ್ಕಳನ್ನು ತಂದು ಕೂರಿಸಿದಂತಿದೆ, ಸರ್ಕಾರ ನಡೆಸುವಾಗ ಆಡಳಿತಾತ್ಮಕ ವಿಷಯಗಳ ಬದಲು ಲೂಟಿಯತ್ತಲೇ ಗಮನ ಹರಿಸಿದ ಬಿಜೆಪಿಗೆ ಆಡಳಿತದ ಸೂಕ್ಷ್ಮ ವಿಷಯಗಳ ಅರಿವು ಬರಲು ಹೇಗೆ ಸಾಧ್ಯ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಟಿಎಂಎಲ್ ಸಾರ್ಟ್ ಸಿಟಿ ಮೊಬಿಲಿಟಿ ಸಲ್ಯೂಷನ್ಸ್ ಲಿಮಿಟೆಡ್ ಎಂಬ ಸಂಸ್ಥೆ ವಿದ್ಯುತ್ ಚಾಲಿತ ಬಸ್ಸುಗಳ ಸೇವೆ ಒದಗಿಸುವ ಒಪ್ಪಂದ ಮಾಡಿಕೊಂಡಿದೆ. ಬಸ್ಸುಗಳು, ಅದರ ಚಾಲಕ, ನಿರ್ವಾಹಕರ ನಿಯೋಜನೆ, ವೇತನ ಮುಂತಾದ ಎಲ್ಲಾ ವಿಷಯಗಳ ಹೊಣೆಯೂ ಸದರಿ ಸಂಸ್ಥೆಯದ್ದೇ ಆಗಿರುತ್ತದೆ.
ಆ ಸಂಸ್ಥೆಯು ತನ್ನ ಚಾಲಕರಿಗೆ ನೀಡುವ ವೇತನದಲ್ಲಿ ವ್ಯತ್ಯಯ ಆಗಿರುವ ಕಾರಣ ಚಾಲಕರು ಸಂಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಿದ್ದರ ಪರಿಣಾಮ ಎಲೆಕ್ಟ್ರಿಕ್ ಬಸ್ಸುಗಳ ಸೇವೆಯಲ್ಲಿ ವ್ಯತ್ಯಯ ಆಗಿದೆ ಎಂದು ವಿವರಿಸಲಾಗಿದೆ.
ಈ ಸೇವೆಯು ಸಂಪೂರ್ಣ ಸದರಿ ಸಂಸ್ಥೆಯ ಜವಾಬ್ದಾರಿಯಾಗಿದ್ದರೂ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿಯವರು ವಿಷಯ ತಿಳಿದ ತಕ್ಷಣವೇ ಹೆಚ್ಚುವರಿ ಬಸ್ಸುಗಳನ್ನು ನಿಯೋಜಿಸಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಅಧಿಕಾರಿಗಳು, ಸಂಸ್ಥೆಯ ಪ್ರತಿನಿಧಿಗಳು ಚಾಲಕರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ.
ಟಿಎಂಎಲ್ ಸಂಸ್ಥೆಗೆ ನೋಟಿಸ್ ಜಾರಿ ಮಾಡಿ ಮುಂದಿನ ದಿನಗಳಲ್ಲಿ ಈ ರೀತಿ ವ್ಯತ್ಯಯ ಆಗದಂತೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಸದ್ಯ ಎಲೆಕ್ಟ್ರಿಕ್ ಬಸ್ಸುಗಳ ಸೇವೆಯು ಸರಾಗವಾಗಿ ನಡೆಯುತ್ತಿದ್ದು, ಯಾವುದೇ ಸಮಸ್ಯೆ ಇಲ್ಲದೆ ಪ್ರಯಾಣಿಕರಿಗೆ ಸೇವೆ ಒದಗಿಸಲಾಗುತ್ತಿದೆ ಎಂದು ವಿವರಿಸಲಾಗಿದೆ.
ವಿಷಯದ ಅರಿವಿಲ್ಲದೆ ಆರೋಪಿಸುವ ಬಿಜೆಪಿಯವರಿಗೆ ತಮ ಸರ್ಕಾರದ ಅವಧಿಯಲ್ಲಿ ಸಾರಿಗೆ ನೌಕರರು ಐತಿಹಾಸಿಕ ಪ್ರತಿಭಟನೆ ನಡೆಸಿದ್ದು ಮರೆತು ಹೋಗಿದೆಯೇ? ಎಂದು ಪ್ರಶ್ನಿಸಲಾಗಿದೆ.
ಸಾರಿಗೆ ನೌಕರರ ಮಕ್ಕಳು ಸಂಬಳ ಕೊಡಿ ಅಂಕಲ್ ಎಂದು ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರ ಬಳಿ ಗೋಳಾಡಿದ್ದನ್ನು ಮರೆಯಲು ಸಾಧ್ಯವೇ? ಪ್ರತಿಭಟನೆ ನಡೆಸಿದ್ದ ಸಾರಿಗೆ ನೌಕರರನ್ನು ದ್ವೇಷದಿಂದ ನೌಕರಿಯಿಂದ ಕಿತ್ತುಹಾಕಿದ್ದನ್ನು ಮರೆಯಬಹುದೇ? ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.