ಅಧಿಕಾರ ದುರುಪಯೋಗ ಬಿಟ್ಟು ನ್ಯಾಯಯುತವಾಗಿ ಆಡಳಿತ ನಡೆಸಿ : ನಿಖಿಲ್‌ ಕುಮಾರಸ್ವಾಮಿ
ಬೆಂಗಳೂರು,ಮೇ23-ಕಾಂಗ್ರೆಸ್‌‍ ಸರ್ಕಾರ ಅಧಿಕಾರ ದುರುಪಯೋಗಪಡಿಸಿಕೊಳ್ಳುವುದನ್ನು ಬಿಟ್ಟು ನ್ಯಾಯಯುತವಾಗಿ ರಾಜ್ಯದಲ್ಲಿ ಆಡಳಿತ ನಡೆಸಬೇಕು ಎಂದು ಜೆಡಿಎಸ್‌‍ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬವನ್ನು ಟಾರ್ಗೆಟ್‌ ಮಾಡಿ ಕಾಂಗ್ರೆಸ್‌‍ ರಾಜಕಾರಣ ಮಾಡುತ್ತಿದೆ ಎಂದು ಹಳ್ಳಿಯ ಜನರೇ ಮಾತನಾಡುತ್ತಿದ್ದಾರೆ ಎಂದರು. ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರನ್ನು ಟಾರ್ಗೆಟ್‌ ಮಾಡಿ ಜೈಲಿಗೆ ಕಳುಹಿಸಿದ್ದರು. ಇದು ಬಹಳ ದಿನ ನಡೆಯುವುದಿಲ್ಲ. ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂದು ಅವರು ಹೇಳಿದರು.
ಆರೋಪ ಕೇಳಿಬಂದಿರುವ ಹಾಸನ ಸಂಸದರು ರಾಜ್ಯಕ್ಕೆ ಆಗಮಿಸಿ ಎಸ್‌‍ಐಟಿ ತನಿಖೆಯನ್ನು ಎದುರಿಸಬೇಕು. ಆರೋಪ ಕೇಳಿಬಂದಾಗ ತನಿಖೆ ಎದುರಿಸುವುದು ಸೂಕ್ತ. ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸಹ ಬಹಿರಂಗ ಆಹ್ವಾನ ನೀಡಿದ್ದಾರೆ ಎಂದರು.
ಫೋನ್‌ ಟ್ಯಾಪಿಂಗ್‌ ಬಗ್ಗೆ ಕುಮಾರಸ್ವಾಮಿ ಅವರಿಗೆ ಮಾಹಿತಿ ಇರಬಹುದು. ಎಸ್‌‍ಐಟಿ ರಚನೆಯಾದ ಮೇಲೆ ಪಾರದರ್ಶಕ ತನಿಖೆ ನಡೆಯುತ್ತಿಲ್ಲ ಎಂದು ಅವರು ಆರೋಪಿಸಿದರು.