ಪ್ರಜ್ವಲ್‌ ರೇವಣ್ಣ ಕ್ಷಮೆಗೆ ಅರ್ಹರಲ್ಲ ; ಕಾನೂನು ರೀತಿ ಅತ್ಯುಗ್ರ ಶಿಕ್ಷೆಯಾಗಲಿ : ಜೋಶಿ
ಹುಬ್ಬಳ್ಳಿ,ಜೂ.1-ಪ್ರಜ್ವಲ್‌ ರೇವಣ್ಣ ಕ್ಷಮೆಗೆ ಅರ್ಹರಲ್ಲ. ಪೆನ್‌ಡ್ರೈವ್‌ ಪ್ರಕರಣದಲ್ಲಿ ಕಟ್ಟುನಿಟ್ಟಿನ ತನಿಖೆ ನಡೆಸಿ ಅತ್ಯುಗ್ರವಾದಂತಹ ಶಿಕ್ಷೆ ವಿಧಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಜ್ವಲ್‌ ರೇವಣ್ಣ ಯಾವ ಕಾರಣಕ್ಕಾಗಿ ರಾಜ್ಯದ ಜನರ ಕ್ಷಮೆ ಕೇಳಿದ್ದಾರೋ ಗೊತ್ತಿಲ್ಲ. ಆದರೆ, ಅವರು ಕ್ಷಮೆಗೆ ಅರ್ಹರಲ್ಲ ಎಂದು ಸ್ಪಷ್ಟಪಡಿಸಿದರು.
ಹೇಸಿಗೆ ತರುತ್ತದೆ :ಮಹಿಳೆಯರನ್ನು ಉನ್ನತ ಸ್ಥಾನದಲ್ಲಿರಿಸಿ, ಅತ್ಯಂತ ಗೌರವದಿಂದ ನೋಡುವ ಭಾರತ ದೇಶದಲ್ಲಿ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ ಹೇಸಿಗೆ ತರಿಸುವ ಕೆಲಸ ಎಂದು ಜೋಶಿ ತೀವ್ರವಾಗಿ ಖಂಡಿಸಿದರು.
ಪೆನ್‌ಡ್ರೈವ್‌ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ಇದುವರೆಗೆ ನಡೆದುಕೊಂಡ ರೀತಿ ಅಕ್ಷಮ್ಯ. ಸಂತ್ರಸ್ತರ ಕ್ಷಮೆ ಕೇಳುತ್ತಾರೋ, ಬಿಡುತ್ತಾರೋ ಆದರೆ, ಇದೊಂದು ಘನಘೋರ ಕೃತ್ಯವಾಗಿದ್ದರಿಂದ ಕಾನೂನು ರೀತಿಯಲ್ಲಿ ಶಿಕ್ಷೆಯಾಗಲೇಬೇಕು. ಇದು ಬಿಜೆಪಿಯ ಸ್ಪಷ್ಟ ನಿಲುವಾಗಿದೆ ಎಂದು ಪ್ರಲ್ಹಾದ ಜೋಶಿ ಹೇಳಿದರು.
ಭಾರತೀಯ ನ್ಯಾಯಾಂಗ ವ್ಯವಸ್ಥೆ ಬಲಿಷ್ಠವಾಗಿದೆ. ತ್ವರಿತವಾಗಿ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ಆರೋಪಿಗೆ ಶೀಘ್ರವೇ ಅತ್ಯುಗ್ರ ಶಿಕ್ಷೆ ವಿಧಿಸಬೇಕು ಎಂದು ಸಚಿವ ಜೋಶಿ ಪ್ರತಿಕ್ರಿಯಿಸಿದರು.