ಸಿಎಂ ವಿರುದ್ದದ ಪ್ರಾಸಿಕ್ಯೂಷನ್‌ ತೀರ್ಪು : ರಾಜ್ಯಾದ್ಯಂತ ಪೊಲೀಸರು ಅಲರ್ಟ್‌
   :    
ಬೆಂಗಳೂರು, ಸೆ.24-ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ವಿಚಾರವಾಗಿ ಇಂದು ಹೈಕೋಟ್‌ನಲ್ಲಿ ತೀರ್ಪು ಬರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯಾದ್ಯಂತ ಪೊಲೀಸರು ಅಲರ್ಟ್‌ ಆಗಿರುವಂತೆ ರಾಜ್ಯದ ಪೊಲೀಸ್‌‍ ಮಹಾನಿರ್ದೇಶಕರಾದ ಅಲೋಕ್‌ ಮೋಹನ್‌ ಅವರು ಸೂಚಿಸಿದ್ದಾರೆ.
ಮುಖ್ಯವಾಗಿ ಸಿಎಂ ನಿವಾಸ, ಕಛೇರಿ ಹಾಗೂ ಕಾವೇರಿ ಬಳಿ ಎರಡು ಕೆಎಸ್‌‍ಆರ್‌ಪಿ ತುಕಡಿ ಹಾಗೂ ಬಿಎಂಟಿಸಿ ಬಸ್‌‍ ನಿಯೋಜಿಸಲಾಗಿದ್ದು, ಪೊಲೀಸ್‌‍ ಸರ್ಪಗಾವಲು ಹಾಕಲಾಗಿದೆ.ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬೆಂಗಳೂರು, ಮೈಸೂರುನಗರ ಸೇರಿದಂತೆ ಎಲ್ಲಾ ನಗರಗಳ ಆಯುಕ್ತರುಗಳು, ಜಿಲ್ಲೆಗಳ ಎಸ್‌‍ಪಿ ಹಾಗೂ ಹಿರಿಯ ಅಧಿಕಾರಿಗಳು ಬಂದೋಬಸ್ತ್‌ನಲ್ಲಿರುವಂತೆ ಅವರು ಸೂಚಿಸಿದ್ದಾರೆ.
ಒಂದು ವೇಳೆ ಸಿಎಂ ವಿರುದ್ಧ ತೀರ್ಪು ಬಂದರೆ, ರಾಜ್ಯದ ವಿವಿಧ ಕಡೆಗಳಲ್ಲಿ ಪ್ರತಿಭಟನೆ ನಡೆಯುವ ಸಾಧ್ಯತೆಯ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಬಂದೋಬಸ್ತ್‌ನಲ್ಲಿರುವಂತೆ ಡಿಜಿಪಿ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಪೂರ್ವ, ಪಶ್ಚಿಮ, ಉತ್ತರ, ಆಗ್ನೇಯ, ಈಶಾನ್ಯ ಸೇರಿದಂತೆ ವೈಟ್‌ಫೀಲ್ಡ್ ವಿಭಾಗದಲ್ಲಿ ಕಟ್ಟೆಚ್ಚರ ವಹಿಸುವಂತೆ ಹಾಗೂ ಎಲ್ಲೆಡೆ ಹೊಯ್ಸಳ ವಾಹನ ಗಸ್ತು ಹೆಚ್ಚಿಸುವಂತೆ ಹಾಗೂ ಎಎಸ್‌‍ಐ ಸೇರಿದಂತೆ ಎಲ್ಲಾ ಪೊಲೀಸ್‌‍ ಸಿಬ್ಬಂದಿ ರೌಂಡ್‌್ಸನಲ್ಲಿರುವಂತೆ ನಗರ ಪೊಲೀಸ್‌‍ ಆಯುಕ್ತ ದಯಾನಂದ ಅವರು ಆದೇಶಿಸಿದ್ದಾರೆ.