ಕೊಲೆಯಾದ ರೇಣುಕಾಸ್ವಾಮಿ ಯಾರು..? ಹಿನ್ನೆಲೆ ಏನು..?
ಬೆಂಗಳೂರು :ನಟ ದರ್ಶನ್ ಹಾಗೂ ಅವರ ಹಿಂಬಾಲಕರಿಂದ ಕೊಲೆಯಾಗಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಚಿತ್ರದುರ್ಗದ ಲಕ್ಷ್ಮಿ ವೆಂಕಟೇಶ್ವರ ಬಡಾವಣೆಯ ನಿವಾಸಿ, ಬೆಸ್ಕಾಂ ನಿವೃತ್ತ ಉದ್ಯೋಗಿ ಶಿವನಗೌಡ-ರತ್ನಪ್ರಭಾ ದಂಪತಿ ಪುತ್ರ ರೇಣುಕಾಸ್ವಾಮಿ. ಎರಡು ವರ್ಷದ ಹಿಂದೆಯಷ್ಟೇ ರೇಣುಕಾಸ್ವಾಮಿ ವಿವಾಹವಾಗಿದ್ದು, ಪತ್ನಿ ಸಹನಾ ಈಗ 3 ತಿಂಗಳ ಗರ್ಭಿಣಿ.
ರೇಣುಕಾಸ್ವಾಮಿ ಮೆಡಿಕಲ್‌ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದರು. ದರ್ಶನ್‌ ಬಾಳಿನಲ್ಲಿ ಪವಿತ್ರ ಇರುವುದು ಇಷ್ಟವಿರಲಿಲ್ಲ. ಹಾಗಾಗಿ ದರ್ಶನ್‌ ಅಭಿಮಾನಿಯಾಗಿದ್ದ ರೇಣುಕಾಸ್ವಾಮಿ, ನಟಿ ಪವಿತ್ರಾ ಗೌಡಗೆ ದರ್ಶನ್‌ ಸಂಸಾರ ಹಾಳು ಮಾಡದೆ ಅವರಿಂದ ದೂರ ಇರುವಂತೆ ಆಗಾಗ್ಗೆ ಮೆಸೇಜ್‌ ಹಾಕುತ್ತಿದ್ದನು ಎಂದು ಹೇಳಲಾಗಿದೆ.
ಕಳೆದ ಶನಿವಾರ ಏಕಾಏಕಿ ರೇಣುಕಾಸ್ವಾಮಿ ನಾಪತ್ತೆಯಾಗಿದ್ದರು. ಇವರ ಮನೆಯವರು ಎಲ್ಲ ಕಡೆ ವಿಚಾರಿಸಿದರೂ ಸುಳಿವು ಸಿಕ್ಕಿರಲಿಲ್ಲ.
ಬೈಕ್‌ ಪತ್ತೆ:ಚಳ್ಳಕೆರೆ ಗೇಟ್‌ ಬಳಿಯ ಬಾಲಾಜಿ ವೈನ್ಸ್ ಸಮೀಪ ರೇಣುಕಾ ಅವರ ಬೈಕ್‌ ಪತ್ತೆಯಾಗಿತ್ತು.
ನಿನ್ನೆ ಕುಟುಂಬದವರಿಗೆ ಮಾಹಿತಿ:ನಗರದ ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿ ಭಾನುವಾರ ಬೆಳಗ್ಗೆ ದೊರೆತ ಶವದ ಗುರುತು ಪತ್ತೆಹಚ್ಚಿದಾಗ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬುದು ಖಚಿತಪಡಿಸಿಕೊಂಡು ಅವರ ಕುಟುಂಬದವರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಕುಟುಂಬಸ್ಥರು ತಕ್ಷಣ ನಗರಕ್ಕೆ ಬಂದು ಮೃತದೇಹವನ್ನು ನೋಡಿ ನಮ ಮಗ ರೇಣುಕಸ್ವಾಮಿಯದೇ ಎಂದು ಗುರುತಿಸಿದ್ದಾರೆ.
ಬುದ್ದಿ ಹೇಳಲು ಕರೆತಂದಿದ್ದ ಬಾಡಿಗಾರ್ಡ್‌ಗಳು:ರೇಣುಕಾಸ್ವಾಮಿಗೆ ಬುದ್ದಿ ಹೇಳಲು ಆತನನ್ನು ನಗರಕ್ಕೆ ಕರೆಸಿಕೊಂಡಿದ್ದ ದರ್ಶನ್‌ ಬಾಡಿಗಾರ್ಡ್‌ಗಳು ಹಾಗೂ ಇನ್ನಿತರರು ಸೇರಿಕೊಂಡು ಹಲ್ಲೆ ಮಾಡಿದ್ದರಿಂದ ಪ್ರಾಣ ಬಿಟ್ಟಿದ್ದಾರೆ.