ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸುತ್ತಿರುವ ಬಿಜೆಪಿಗರ ವಿರುದ್ಧ ಜಮೀರ್‌ ಆಕ್ರೋಶ
ಬೆಂಗಳೂರು, ಜೂ.17-ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಹೆಚ್ಚು ಮಾಡಲಾಗಿದೆ ಎಂದು ಬೊಬ್ಬೆ ಹಾಕುತ್ತಿರುವ ಬಿಜೆಪಿ ನಾಯಕರು ಅವರ ಆಡಳಿತದಲ್ಲಿ ಶತಕದ ಗಡಿ ದಾಟಿದಾಗ ಯಾಕೆ ಧ್ವನಿ ಎತ್ತಲಿಲ್ಲ ಎಂದು ಸಚಿವ ಜಮೀರ್‌ ಅಹಮದ್‌ ಖಾನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, 2013 ರಲ್ಲಿ ಯುಪಿಎ ಸರ್ಕಾರ ಇದ್ದಾಗ ಪೆಟ್ರೋಲ್‌ -ಡೀಸೆಲ್‌‍, ಅಡುಗೆ ಅನಿಲ ಬೆಲೆ ಎಷ್ಟು ಇತ್ತು? ಬಿಜೆಪಿ ಸರ್ಕಾರ ಹತ್ತು ವರ್ಷಗಳಲ್ಲಿ ಎಷ್ಟು ಹೆಚ್ಚು ಮಾಡಿ ಜನರ ಮೇಲೆ ಭಾರ ಹಾಕಿತು ಎಂಬುದು ಗೊತ್ತಿದೆ. ಈಗಲೂ ಪೆಟ್ರೋಲ್‌ ಮತ್ತು ಡಿಸೇಲ್‌ ಮೇಲೆ ಕೇಂದ್ರ ಅಬಕಾರಿ ಸುಂಕ ಕರ್ನಾಟಕದಲ್ಲಿ ಹೆಚ್ಚು ಸಂಗ್ರಹ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
ಕರ್ನಾಟಕ ದಲ್ಲಿ ತೆರಿಗೆ ಹೆಚ್ಚಳ ನಂತರ ಪೆಟ್ರೋಲ್‌ 102.85 ರೂ., ಡಿಸೇಲ್‌ 88.91 ರೂ. ಇದೆ. ಆದರೆ ದಕ್ಷಿಣ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಈಗಲೂ ನಮದೇ ಕಡಿಮೆ ಎಂದು ಅವರು ಹೇಳಿದ್ದಾರೆ.
ಕಚ್ಚಾ ತೈಲ ಬೆಲೆ ಹೆಚ್ಚಿದ್ದಾಗ ಯುಪಿಎ ಸರ್ಕಾರ ಪೆಟ್ರೋಲ್‌‍, ಡೀಸೆಲ್‌ ಬೆಲೆ ಹೆಚ್ಚಳ ಮಾಡಿರಲಿಲ್ಲ, ಆದರೆ ಕೇಂದ್ರ ಬಿಜೆಪಿ ಸರ್ಕಾರ ಕಚ್ಚಾ ತೈಲ ಬೆಲೆ ಇಳಿಕೆ ಆಗಿದ್ದಾರೂ ಬೆಲೆ ಹೆಚ್ಚಿಸಿ ಜನರಿಗೆ ವಂಚನೆ ಮಾಡಿತು. ಹೀಗಾಗಿ ಬಿಜೆಪಿ ಅವರಿಗೆ ಹೋರಾಟ ಮಾಡುವ ನೈತಿಕತೆ ಇಲ್ಲ ಎಂದು ಟೀಕಿಸಿದ್ದಾರೆ.